ಮೈಸೂರು ನಾಗರಿಕರಿಗೆ ಮತ್ತೊಂದು ಖುಷಿ ಸುದ್ದಿ, ಹೈದರಾಬಾದ್‌ಗೆ ಇನ್ನೊಂದು ವಿಮಾನ ಸೇರ್ಪಡೆ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು ನಾಗರಿಕರಿಗೆ ಮತ್ತೊಂದು ಖುಷಿ ಸುದ್ದಿ, ಹೈದರಾಬಾದ್‌ಗೆ ಇನ್ನೊಂದು ವಿಮಾನ ಸೇರ್ಪಡೆ

ಮುಂದಿನ ದಿನಗಳಲ್ಲಿ ಪ್ರಮುಖ ನಗರಗಳಿಗೆ ಹೆಚ್ಚುವರಿ ವಿಮಾನ ಸೇವೆ: ಸಂಸದ ಯದುವೀರ್‌ ಭರವಸೆ

ಮೈಸೂರು, ಏ. 16: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಾಂಸ್ಕೃತಿಕ ರಾಜಧಾನಿಯ ನಾಗರಿಕರಿಗೆ ಮತ್ತೊಂದು ಖುಷಿ ಬಂದಿದೆ. ಮೈಸೂರಿನಿಂದ ಮುತ್ತಿನ ನಗರಿ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ ಅತಿ ಶೀಘ್ರದಲ್ಲೇ ಆರಂಭವಾಗಲಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಮೈಸೂರಿನಿಂದ ಹೈದರಾಬಾದ್‌ಗೆ ಮೇ 1ರಿಂದ ಈ ಈ ವಿಮಾನ ಸೇವೆ ಆರಂಭವಾಗಲಿದೆ. ಮಧ್ಯಾಹ್ನ ೨.೨೦ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ ನಾಲ್ಕು ಗಂಟೆಗೆ ಹೈದರಾಬಾದ್‌ ತಲುಪಲಿದೆ.

ಈಗಾಗಲೇ ಎರಡು ವಿಮಾನ ಚೆನ್ನೈ, ಹೈದರಾಬಾದ್‌ಗೆ ತೆರಳುತ್ತಿದ್ದು, ಈ ವಿಮಾನ ಸಂಚಾರ ಸೇವೆಯಿಂದ ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಇನ್ನಷ್ಟು ಮಾಹಿತಿ ಹಂಚಿಕೊಂಡಿರುವ ಸಂಸದ ಯದುವೀರ್‌ ಒಡೆಯರ್‌, ಮುಂದಿನ ದಿನಗಳಲ್ಲಿ ಮೈಸೂರಿನಿಂದ ಹೆಚ್ಚುವರಿ ವಿಮಾನ ಸಂಚಾರ ಆರಂಭವಾಗಲಿದೆ ಎಂದರು.

ಏರ್‌ ಟ್ರಾಫಿಕ್‌ ಹೆಚ್ಚಳದ ಗುರಿ

ಮೈಸೂರಿನಿಂದ ವಾಯು ಸಂಚಾರ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಬಾರಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.

ವಿಮಾನ ನಿಲ್ದಾಣ ವಿಸ್ತರಣೆಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದು ಹಸ್ತಾಂತರಗೊಂಡ ನಂತರ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ವಿವರಿಸಿದರು.

ಒಮ್ಮೆ ವಿಮಾನ ನಿಲ್ದಾಣ ವಿಸ್ತರಣೆಗೊಂಡ ನಂತರ ದೇಶದ ನಾನಾ ಪ್ರಮುಖ ನಗರಗಳಿಗೆ ಮೈಸೂರಿನಿಂದ ನೇರ ವಿಮಾನ ಸಂಚಾರ ಸೇವೆ ಆರಂಭಗೊಳ್ಳಲಿದೆ. ಇದರೊಂದಿಗೆ ಮೈಸೂರಿನ ಅಭಿವೃದ್ಧಿಯೂ ಸಮಾನಾಂತರವಾಗಿ ಆಗಲಿದೆ ಎಂದು ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

ಮೈಸೂರಿನಿಂದ ಏರ್‌ ಟ್ರಾಫಿಕ್‌ ಹೆಚ್ಚಿಸಲು ಎಲ್ಲ ರೀತಿಯ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಂಪೂರ್ಣ ಕಾರ್ಯ ಪ್ರವೃತ್ತನಾಗಲಿದ್ದೇನೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

Share This Article
Leave a Comment