ಪಬ್ಲಿಕ್ ಅಲರ್ಟ್
ಮೈಸೂರು: ತಾವು ನಿರ್ದೇಶಿಸಿ, ನಿರ್ಮಿಸಿರುವ “ಭಾರತದ ಪ್ರಜೆಗಳಾದ ನಾವು” ಚಲನಚಿತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಚಲನಚಿತ್ರ ಎಂಬ ಪ್ರಶಸ್ತಿ ದೊರೆತಿದೆ ಎಂದು ಡಾ. ಕೃಷ್ಣಮೂರ್ತಿ ಚಮರಂ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಮೈಸೂರಿನ ಕಲಾವಿದರೇ ಇರುವ ಹಾಗೂ ಮೈಸೂರು ಸುತ್ತಮುತ್ತಲೇ ಚಿತ್ರಿಸಿರುವ ಸಿನಿಮಾ ಇದಾಗಿದೆ. ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರೆತಿದೆ. ಇದರಿಂದಾಗಿ ಮೈಸೂರು- ಚಾಮರಾಜನಗರ ಭಾಗಕ್ಕೆ ಉತ್ತಮ ಗೌರವ ದೊರೆತಂತಾಗಿದೆ ಎಂಧರು,.
ಸಂವಿಧಾನ ಪೀಠಿಕೆ ಅಡಿಯಲ್ಲಿ ಎಲ್ಲರೂ ಭ್ರಾತೃತ್ವ, ಸಮಾನತೆಗಳ ಶಪಥ ಮಾಡುತ್ತೇವೆ. ಆದರೆ ಜಾತಿ, ಧರ್ಮದ ನೆಲೆಯಲ್ಲೇ ಇವುಗಳ ಪಾಲನೆ ಮಾಡುವುದಿಲ್ಲ. ಸಂಘರ್ಷಕ್ಕೆಡೆ ಮಾಡದೇ ಇವನ್ನು ಹೇಗೆ ಸ್ಥಾಪಿಸಬಹುದೆಂಬ ಆಶಯ ಸಿನಿಮಾದ್ದಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಹಕ್ಕುಗಳನ್ನು ಕಸಿಯುತ್ತಿದ್ದು, ಇವುಗಳನ್ನು ಪ್ರಯತ್ನಿಸಿದರೆ ಹೇಗೆ ದೊರಕಿಸಿಕೊಡಬಹುದೆಂಬ ಸಂದೇಶ ಚಿತ್ರದಲ್ಲಿದೆ ಎಂದರು.
ಸಿನಿಮಾದಲ್ಲಿ ನಾಲ್ಕು ಹೋರಾಟ ಗೀತೆಗಳಿವೆ. ಸುಮಾರು ೫೦ ಲಕ್ಷ ರೂ. ಬಜೆಟ್ನಲ್ಲಿ ಚಿತ್ರ ನಿರ್ಮಿಸಲಾಗಿದೆ. ಇಂತಹ ಚಿತ್ರಗಳನ್ನು ಬೆಂಬಲಿಸುವ ಮನಸ್ಥಿತಿಯವರು ರಾಜ್ಯದಲ್ಲಿ ಕಡಿಮೆ. ಆದರೆ ತಮಿಳುನಾಡಿನಲ್ಲಿ ಇಂತಹದೊಂದು ಚಿತ್ರ ನಿರ್ಮಾಣವಾದರೆ ಸ್ಟಾರ್ಗಳೂ ಸಹಾ ವೀಕ್ಷಿಸಿ, ಒಂದಷ್ಟು ಒಳ್ಳೆಯ ಮಾತನ್ನಾಡುತ್ತಾರೆ. ಇದರಿಂದಾಗಿ ಅವರ ಅಭಿಮಾನಿಗಳೂ ಸಿನಿಮಾ ನೋಡುತ್ತಾರೆ. ಈ ಪ್ರವೃತ್ತಿ ಇಲ್ಲಿಯೂ ಬೆಳೆಯಬೇಕೆಂದು ಆಶಿಸಿದರು. ನೆಲೆ ಹಿನ್ನೆಲೆ ಗೋಪಾಲ ಕೃಷ್ಣ, ಸತೀಶ್ ಪೊನ್ನಾಚಿ, ಶಿವಾಜಿ, ಮಹದೇವಮೂರ್ತಿ, ಪುಷ್ಪಲತಾ, ಸುಪ್ರೀತ್ ಮೊದಲಾದವರು ಇದ್ದರು.
