ಪಬ್ಲಿಕ್ ಅಲರ್ಟ್
ಚಾಮರಾಜನಗರ: ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಸಲಹೆ ಮಾಡಿದರು.
ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ದೇವರಂತೆ, ಸರಿ-ತಪ್ಪುಗಳ ಅರಿವು ಇರುವುದಿಲ್ಲ. ವಯೋಸಹಜವಾಗಿ ಹಿರಿಯ ನಾಗರಿಕರು ಸಹ ಮಕ್ಕಳು ಆಗಿರುತ್ತಾರೆ. ಬಾಲ್ಯ, ಯೌವ್ವನ, ಮುಪ್ಪು ಈ ಮೂರು ಹಂತಗಳಲ್ಲಿನ ಸಿಹಿ-ಕಹಿ ಅನುಭವಗಳು ಹಿರಿಯರಿಗೆ ಇರುತ್ತವೆ. ಒಂದು ಸಮಾಜ, ಕುಟುಂಬ ಉತ್ತಮವಾಗಿ ಸಾಗಲು ಹಿರಿಯರ ಮಾರ್ಗದರ್ಶನದ ಅವಶ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸಿ ತುಚ್ಛವಾಗಿ ಕಾಣುತ್ತಿರುವುದು ಸಾಮಾನ್ಯವಾಗಿದೆ. ಇದು ಸಲ್ಲದು. ಕುಟುಂಬದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹಿರಿಯರನ್ನು ಗೌರವ, ಆದರಗಳಿಂದ ನೋಡಿಕೊಳ್ಳಬೇಕು ಎಂದರು. ಹಿರಿಯರ ಪಾಲನೆ ಬಗ್ಗೆ ಅಸಡ್ಡೆ ವಹಿಸಿ ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಿರಿಯ ನಾಗರಿಕರ ಸಲಹೆಗಳನ್ನು ಮಕ್ಕಳು ತಪ್ಪಾಗಿ ಅರ್ಥೈಸದೇ ಅವರನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಮಕ್ಕಳು ಕಡೆಗಣಿಸಿದರೂ ಹಿರಿಯರು ಧೃತಿಗೆಡದೇ ಧೈರ್ಯವಾಗಿ ಸ್ವಾವಲಂಬಿ ಜೀವನ ನಡೆಸಲು ಸಿದ್ದರಾಗಿರಬೇಕು. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಹತ್ತು-ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯೋಜನೆಗಳು ಸಮರ್ಪಕವಾಗಿ ಹಿರಿಯ ನಾಗರಿಕರನ್ನು ತಲುಪಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಸರ್ಕಾರವು ಅನುಷ್ಟಾನಗೊಳಿಸಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರ, ಹಿರಿಯ ನಾಗರಿಕರ ಸಹಾಯವಾಣಿ, ಬಸ್ಸು ರೈಲುಗಳ ಪ್ರಯಾಣದಲ್ಲಿ ರಿಯಾಯಿತಿ ದರ ನಿಗದಿ, ಪಿಂಚಣಿ ಸೌಲಭ್ಯ ನೀಡಿದೆ. ವೃದ್ಧಾಶ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳು ದಾಖಲಾಗಿದ್ದರೆ ಆದ್ಯತೆ ಮೇರೆಗೆ ಪರಿಹರಿಸುವಂತೆ ಉಚ್ಛ ನ್ಯಾಯಾಲಯದ ಆದೇಶವಿದೆ. ವೃದ್ಧಾಶ್ರಮಗಳಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದ ನ್ಯಾಯಾಧೀಶರು ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಹಿರಿಯರು ಒಗ್ಗೂಡಿ ಸಂತಸದಿಂದ ಪಾಲ್ಗೊಳ್ಳುವಂತೆ ಸಲಹೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಸ್. ಸುರೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗೇಶ್ ಅವರು ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮೀನಾಕ್ಷಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಿಕ್ಕಬಸವಯ್ಯ, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್ಕುಮಾರ್, ವೃದ್ಧಾಶ್ರಮದ ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅ. 1 ರಂದು ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದ ಬಳಿಕ ಹಿರಿಯ ನಾಗರಿಕರಿಗೆ ಬಿರುಸಿನ ನಡಿಗೆ, ಮ್ಯೂಸಿಕಲ್ ಚೇರ್ ಬಕೆಟ್ ಬಾಲ್ ಸ್ಪರ್ಧೆಗಳು ಹಾಗೂ ಗಾಯನ ಮತ್ತು ಏಕ ಪಾತ್ರಾಭಿನಯ ಸ್ಪರ್ಧೆಗಳು ನಡೆದವು.
