ಪಬ್ಲಿಕ್ ಅಲರ್ಟ್
ಮೈಸೂರು: ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಟೀಕೆ ಮಾಡುವ ಬಾನು ಮುಷ್ತಾಕ್ ಅವರು ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಿಸಲು ಆಹ್ವಾನಿಸುವುದು ಬೇಡವೆಂದು ಒತ್ತಾಯಿಸಿದರೂ ಸರ್ಕಾರ ಮೊಂಡುತನ ತೋರಿದೆ. ಹೀಗಾಗಿ ಇದನ್ನು ವಿರೋಧಿಸಿ ಸೆ.೯ರಂದು ಚಾಮುಂಡಿಬೆಟ್ಟಕ್ಕೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಾಂತ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದರು.
ಅಂದು ಬೆಳಗ್ಗೆ ೭.೩೦ಕೆ ಕುರುಬಾರಹಳ್ಳಿ ವೃತ್ತದಿಂದ ಪಾದಯಾತ್ರೆ ಹೊರಡಲಿದೆ. ಇದರಲ್ಲಿ ಸುಮಾರು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಬೆಟ್ಟದ ಮೇಲೆ ಪ್ರತಿಭಟನಾ ಸಭೆ ಸಹಾ ನಡೆಯಲಿದೆ ಎಂದರು. ಬಾನು ಮುಷ್ತಾಕ್ ಅವರ ಆಯ್ಕೆ ವಿರುದ್ಧ ಈಗಾಗಲೇ ವೇದಿಕೆ ಮಾತ್ರವಲ್ಲದೆ, ಅನೇಕ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಧಾರ್ಮಿಕ ವ್ಯಕ್ತಿಗಳು ಮಾತನಾಡಿದ್ದಾರೆ. ಹೀಗಿದ್ದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಬಾನು ಮುಷ್ತಾಕ್ ಅವರು ಈ ಹಿಂದೆ ಸಾಹಿತ್ಯ ಸಮ್ಮೇಳನದಲ್ಲಿ ತಾಯಿ ಭುವನೇಶ್ವರಿಯ ಅರಿಶಿನ ಕುಂಕುಮದ ಬಗ್ಗೆ ಅವಹೇಳನ ಮಾತನ್ನಾಡಿದ್ದಾರೆ. ಇದು ಎಲ್ಲರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಇವರು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾಡಿನ ಆಚಾರ, ವಿಚಾರಗಳ ಬಗ್ಗೆ, ಸಂಸ್ಕೃತಿ ಬಗ್ಗೆ, ಧಾರ್ಮಿಕ ಆಚರಣೆ ಬಗ್ಗೆ ನಂಬಿಕೆ ಇಲ್ಲದವರಿಗೆ ತಾಯಿ ಚಾಮುಂಡೇಶ್ವರಿಯ ಬಗ್ಗೆ, ನವರಾತ್ರಿ ಬಗ್ಗೆ ನಿಲುವು ಹೇಗಿರಬಹುದು ಎಂಬುದು ನಮ್ಮ ಪ್ರಶ್ನೆಯಾಗಿದೆ. ಹೀಗಾಗಿ ಬಹುಸಂಖ್ಯಾತ ಹಿಮದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗದ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನಮ್ಮ ಅಭ್ಯಂತರವಿಲ್ಲ. ಆದರೆ ಧಾರ್ಮಿಕ ಭಾವನೆಗೆ, ಶ್ರದ್ಧೆಗೆ ಚ್ಯುತಿ ಬರುವಂತೆ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಇನ್ನಿತರ ಪದಾಧಿಕಾರಿಗಳಾದ ಮನುಶ್ರೀನಿವಾಸ್, ರಾಜನ್, ಚಂದ್ರಸ್ವಾಮಿ, ವಸಂತ್ಕುಮಾರ್ ಹಾಜರಿದ್ದರು.
