ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯಾದ್ಯಂತ ಸ್ಥಳೀಯ ಸಮಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿವಿಧ ಬೇಡಿಕೆ ಈಡೇರಿಕೆಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಕುರಿತು ಕಳೆದ ೧೨ ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದರು. ಈ ವೇಳೆ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಕಾಯಂ ಆಗದೇ ಬಾಕಿ ಉಳಿದಿರುವ ಪೌರ ಕಾರ್ಮಿಕರ ಕಾಯಂಗೊಳಿಸುವಿಕೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಒಳಚರಂಡಿ ಕಾರ್ಮಿಕ ಸಹಾಯಕರರನ್ನು ಸಹಾ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಕಾಯಂಗೊಳಿಸಬೇಕೆಂದು ಮನವಿ ಮಾಡಲಾಯಿತು. ಸೂಪರ್ ನ್ಯೂಮರ್ ಹುದ್ದೆ ರದ್ದುಗೊಳಿಸಿ ಕಾಯಂಗೊಳಿಸಬೇಕು, ನೇರ ನೇಮಕಾತಿ ಜಾರಿಗೊಳಿಸಬೇಕು, ಅನುಕಂಪದ ಕೆಲಸ ನೀಡಬೇಕು, ಐಪಿಡಿ ಸಾಲಪ್ಪ ವರದಿಯಂತೆ ಪ್ರತಿ ೫೦೦ ಮಂದಿಗೆ ಓರ್ವ ಪೌರ ಕಾರ್ಮಿಕರ ನೇಮಕ ಮಾಡಿಕೋಳ್ಳಬೇಕು. ಕರ್ತವ್ಯ ವೇಳೆ ಮೃತಪಟ್ಟರೆ ೧೦ ಲಕ್ಷ ಪರಿಹಾರ, ಎಲ್ಲರಿಗೂ ವಸತಿ ಭಾಗ್ಯ ನೀಡಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಯಿತು. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಇನ್ನಿತರ ಪದಾಧಿಕಾರಿಗಳಾದ ಆರ್. ಶಿವ, ಆರ್. ದಾಸ್, ಯತಿರಾಜ್, ಪಳನಿ, ಆರ್ಟಿಸ್ಟ್ ನಾಗರಾಜ್ ಮೊದಲಾದವರಿದ್ದರು.
