ಪಬ್ಲಿಕ್ ಅಲರ್ಟ್
ಮೈಸೂರು: ಜಂಬೂಸವಾರಿ ಸಾಗುವ ಮಾರ್ಗವಾದ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ರಸ್ತೆ ಬದಿಗಳಲ್ಲಿ ಬೃಹತ್ ಮರಗಳಲ್ಲಿ ಒಣಗಿರುವ ಅಪಾಯಕಾರಿ ರೆಂಬೆ ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಅದರಂತೆ ಇಂದು ಅರಮನೆ ಸುತ್ತ ಇರುವ ರಸ್ತೆಗಳು, ಗೌನ್ ರಸ್ತೆ, ಹಾರ್ಡಿಂಗ್ ವೃತ್ತ, ಕಾಡಾ ಕಚೇರಿ ರಸ್ತೆ, ಕೆ.ಆರ್.ರಸ್ತೆಗಳಲ್ಲಿ ಇರುವ ಬೃಹತ್ ಮರಗಳನ್ನು ಪರಿಶೀಲಿಸಿದ ಬಳಿಕ, ಒಣಗಿ ಬೀಳುವ ಮಟ್ಟದಲ್ಲಿರುವ ಕೊಂಬೆ, ರೆಂಬೆಗಳನ್ನು ಯಂತ್ರದ ಮೂಲಕ ಕತ್ತರಿಸಲಾಯಿತು. ಹಾರ್ಡಿಂಗ್ ವೃತ್ತದಿಂದ ಗನ್ ಹೌಸ್ ವೃತ್ತದವರೆಗೆ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಸಿಬ್ಬಂದಿ ಮಾಡಿದರು. ಕಾರ್ಯಾಚರಣೆ ವೇಳೆ ವಾಹನಗಳ ಸಂಚಾರಕ್ಕೆ ಬ್ರೇಕ್ ನೀಡಿ ತೆರವುಗೊಳಿಸಿ, ನಂತರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ದಸರಾ ಸಂಭ್ರಮ ನೋಡಲು ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಡಬ್ಬಲ್ ಡೆಕ್ಕರ್(ಅಂಬಾರಿ ಬಸ್)ನಲ್ಲಿ ಪ್ರವಾಸಿಗರು, ಸ್ಥಳೀಯರು, ಸಂಚಾರ ಮಾಡಲು ಇಷ್ಟಪಡುತ್ತಾರೆ. ಡಬ್ಬಲ್ ಡೆಕ್ಕರ್ ಸಂಚಾರ ಮಾಡುವ ರಸ್ತೆಗಳಾದ ಜೆಎಲ್ ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಹಾರ್ಡಿಂಗ್ ವೃತ್ತ, ರೈಲ್ವೆ ಸ್ಟೇಷನ್ ರಸ್ತೆಗಳಲ್ಲಿರುವ ಮರಗಳ ರೆಂಬೆ, ಕೊಂಬೆ ತೆರವು ಮಾಡಲಾಗುತ್ತಿದೆ. ಅಲ್ಲದೇ, ದೀಪಾಲಂಕಾರಕ್ಕಾಗಿ ಹಲವೆಡೆ ಕಂಬಗಳನ್ನು ಅಳವಡಿಸುತ್ತಿರುವ ಸೆಸ್ಕ್ ಕೂಡ, ಮರಗಳಿಂದ ಅಪಾಯಕಾರಿಯಾಗುವ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಿ ಜಾಗ್ರತೆ ವಹಿಸುತ್ತಿದೆ. ಮಳೆಯಾದರೆ ಹಸಿ ಇರುವ ಮರಗಳಿಗೆ ವಿದ್ಯುತ್ ಸ್ಪರ್ಶಿಸಿದರೆ ಅಪಾಯ ಎದುರಾಗಬಹುದು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾಯಕಾರಿ ಮರಗಳ ರೆಂಬೆ, ಕೊಂಬೆ ತೆರವುಗೊಳಿಸಲಾಗುತ್ತಿದೆ.
ನಗರಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಿ.ಕೆ.ಮೋಹನಕುಮಾರ್ ಮಾತನಾಡಿದ, ದಸರಾ ಸಮೀಪಿಸುತ್ತಿದೆ. ಜಂಬೂಸವಾರಿ ಸಾಗುವ ಮಾರ್ಗ ಹಾಗೂ ಡಬ್ಬಲ್ ಡೆಕ್ಕರ್ (ಅಂಬಾರಿ ಬಸ್) ಸಾಗುವ ಮಾರ್ಗಗಳಲ್ಲಿ ಮರಗಳ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ತಂಡ ಕೂಡ ರೆಡಿ ಮಾಡಲಾಗಿದೆ. ಅಪಾಯಕಾರಿ ಮರಗಳು ಕಂಡುಬಂದರೆ ನಗರ ಪಾಲಿಕೆಯ ಕಂಟ್ರೋಲ್ ರೂಂಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದರೆ ತೆರವುಗೊಳಿಸಲಾಗುವುದು ಎಂದರು.