ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಬಂದೋಬಸ್ತ್ಗಾಗಿ 7,583ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೆ.22ರಿಂದ ಅ.2ರವರೆಗೆ ಒಟ್ಟು 11 ದಿನಗಳ ಕಾಲ ದಸರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿದೆ. ಇದಕ್ಕಾಗಿ 2 ಸುತ್ತಿನ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ಶುಕ್ರವಾರ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಭದ್ರತೆಗಾಗಿ 6384 ಸಿವಿಲ್ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, 35 ಕೆಎಸ್ಆರ್ಪಿ ತುಕಡಿ, 15 ಸಿಎಆರ್ ಮತ್ತು ಡಿಎಆರ್ ತುಕಡಿ, 29 ಎಎಸ್ಸಿ ತಂಡಗಳು, 1 ಗರುಡ ಫರ್ಸ್, 1 ಆರ್ಎಎಫ್ ತುಕಡಿ, 1200 ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಎರಡು ಹಂತದ ಭದ್ರತೆ: ಸೆ. 22ರಿಂದ 29ರವರೆಗೆ 1ನೇ ಹಂತ ಹಾಗೂ ಸೆ.30ರಿಂದ ಅ.2ರವರೆಗೆ 2ನೇ ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟದ ದಸರಾ ಉದ್ಘಾಟನೆ ಕಾರ್ಯಕ್ರಮ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳ ಬಂದೋಬಸ್ತ್ ಹಾಗೂ ಸುಗಮ ಸಂಚಾರ ವ್ಯವಸ್ಥೆ ಸೇರಿದಂತೆ ಮೈಸೂರು ನಗರ ಸೇರಿದಂತೆ ಹೊರ ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
32 ಆಂಬುಲೆನ್ಸ್: ಜಂಬೂ ಸವಾರಿಯಂದು ಅರಮನೆ, ಅಂಬಾರಿ ತೆರಳುವ ಮಾರ್ಗ, ಬನ್ನಿಮಂಟಪ ಮುಂತಾದ ಜನದಟ್ಟಣೆ ಸೇರುವ ಜಾಗದಲ್ಲಿ 26 ಆಂಬುಲೆನ್ಸ್ ಮತ್ತು 32 ಅಗ್ನಿ ಶಾಮಕ ದಳದ ವಾಹನ ನಿಯೋಜಿಸಲಾಗಿದೆ.
ಮಾಹಿತಿ ಕೇಂದ್ರ: ದಸರಾ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 43 ಸಾರ್ವಜನಿಕ ಮಾಹಿತಿ ಕೇಂದ್ರ ಸ್ಥಾಪಿಸಿದ್ದು, ಸಂಚಾರ ಪೊಲೀಸರು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಿದ್ದಾರೆ.
ವಿಜಯ ದಶಮಿಯಂದು ಅರಮನೆಯ ದ್ವಾರಗಳು, ಜಂಬೂ ಸವಾರಿ ಮಾರ್ಗದಲ್ಲಿ ಒಟ್ಟು 33 ಮಾಹಿತಿ ಕೇಂದ್ರಗಳಲ್ಲಿ ಸಿವಿಲ್ ಪೊಲೀಸರು ಮಾಹಿತಿ ನೀಡಲಿದ್ದಾರೆ.
ಪೊಲೀಸ್ ಸಹಾಯ ಕೇಂದ್ರಗಳು: ಸೆ.22ರಿಂದ ಅ.1ರವರೆಗೆ ಜಗಜೀವನರಾಮ್ ವೃತ್ತ, ರೈಲ್ವೆ ನಿಲ್ದಾಣ, ಅರಮನೆಯ ವರಾಹ ಗೇಟ್, ಕೆ.ಆರ್.ವೃತ್ತ, ಸೆಂಟ್ ಫಿಲೋಮಿನ ಚರ್ಚ್, ಗ್ರಾಮಾಂತರ ಬಸ್ ನಿಲ್ದಾಣ, ಗಾಂಧಿ ಚೌಕ, ಮೈಸೂರು ಮೃಗಾಲಯ, ದಸರಾ ವಸ್ತು ಪ್ರದರ್ಶನ, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ನಂಜನಗೂಡು ರಿಂಗ್ ರಸ್ತೆ, ದೇವೇಗೌಡ ವೃತ್ತ, ಹೂಟಗಳ್ಳಿ ಜಂಕ್ಷನ್ಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ಇಲ್ಲಿನ ಸಿಬ್ಬಂದಿ ಏಕಮುಖ ಸಂಚಾರ, ವಾಹನ ನಿಲುಗಡೆ ಮುಂತಾದವುಗಳ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಜತೆಗೆ ಸುರಕ್ಷತೆ, ಭದ್ರತೆ ಮತ್ತು ಪೊಲೀಸರೊಂದಿಗೆ ವರ್ತನೆ ಕುರಿತು ಎರಡು ಕಿರುಹೊತ್ತಿಗೆಗಳನ್ನು ಮುದ್ರಿಸಲಾಗಿದ್ದು, ಅವುಗಳನ್ನು ಸಾರ್ವಜನಿಕರಿಗೆ ಹಂಚಲಾಗುವುದು ಎಂದು ವಿವರಿಸಿದರು. ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್ ಮತ್ತು ಬಿಂದು ಮಣಿ ಗೋಷ್ಠಿಯಲ್ಲಿದ್ದರು.


ಬಾಕ್ಸ್
ಸಿಸಿ ಕ್ಯಾಮರಾ ಕಣ್ಗಾವಲು
ದಸರಾ ಸಂದರ್ಭದಲ್ಲಿ ಅಪರಾಧ ಕೃತ್ಯ ನಡೆಸುವವರ ವಿರುದ್ಧ ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ ಸುಮಾರು 30,614 ಸಿಸಿ ಕ್ಯಾಮರಾಗಳ ಮೂಲಕ ಪೊಲೀಸರು ನಿಗಾ ಇಡಲಿದ್ದಾರೆ. ಹೆಚ್ಚುವರಿಯಾಗಿ ಜಂಬೂ ಸವಾರಿ ಮಾರ್ಗ ಮತ್ತು ಇತರೇ ಪ್ರಮುಖ ಸ್ಥಳಗಳಲ್ಲಿ ಒಟ್ಟು 200 ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದರು.
ಬಾಕ್ಸ್
ಸೊಷಿಯಲ್ ವೇದಿಕೆ ಮೇಲೂ ನಿಗಾ
ದಸರಾ ಉದ್ಘಾಟನೆಯಿಂದ ಮುಗಿಯುವವರೆಗಿನ ಯಾವುದೇ ಸಂದರ್ಭ ಅಥವಾ ಹಳೆ ವಿಡಿಯೋಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಬಾಹಿರ ಹಾಗೂ ಪ್ರಚೋದನಾಕಾರಿ ಫೋಸ್ಟ್, ರಿಲ್ಸ್, ವಿಡಿಯೋ ಹಾಕುವವರ ಮೇಲೆ ೫೨ಮಂದಿ ನಿಗಾವಹಿಸಿ ಸೂಕ್ತಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲದೆ, ಜನಸಂದಣಿ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಅನಿರಿಕ್ಷಿತವಾಗಿ ಹೊರ ಬರಲು ಸಹ ಇದೇ ಮೊದಲ ಬಾರಿಗೆ ತುರ್ತು ಹೊರಬರುವಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಸರಾ ಮುಂಜಾಗೃತಾ ಕ್ರಮ
– ಪ್ರಮುಖ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾ ಕಣ್ಗಾವಲು
– ಲಾಡ್ಜ್ಗಳ ಮೇಲೆ ಅನಿರೀಕ್ಷಿತ ದಾಳಿ, ತಪಾಸಣೆ
– ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆ ಗಸ್ತು
– ರೌಡಿ ಪರೇಡ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ
– ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸಭೆ ವೈದ್ಯಕೀಯ ನೆರವು, ತುರ್ತು ಪರಿಸ್ಥಿತಿಗೆ ಹಾಸಿಗೆ ಕಾಯ್ದಿರಿಸಲು ಸೂಚನೆ
– ಪಾರಂಪರಿಕ ಕಟ್ಟಡಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮೇಲೆ ಕೂರದಂತೆ ಕ್ರಮ
– ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ
ಸಂಚಾರ ಮಾರ್ಗ ಬದಲು
ದಸರಾ ಹಿನ್ನೆಲೆಯಲ್ಲಿ ನಗರದ ಕೆಲ ಮಾರ್ಗಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅರಮನೆ ಸುತ್ತಮುತ್ತ ರಸ್ತೆಗಳು ಹಾಗೂ ಇತರೇ ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ. ಗ್ರಾಮಾಂತರ ಬಸ್ಗಳು, ನಗರ ಸಾರಿಗೆ ಬಸ್ಗಳು, ಖಾಸಗಿ ಬಸ್ಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿಯಂದು ಸಾತಗಳ್ಳಿ ಬಸ್ ನಿಲ್ದಾಣ, ಮಹಾರಾಜ ಕಾಲೇಜು, ಮೈದಾನ, ಗುಂಡುರಾವ್ನಗರ, ಲಲಿತಮಹಲ್ ಆಟದ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ನಗರ ಬಸ್ಗಳಿಗೆ ಮಹಾರಾಜ ಕಾಲೇಜು ಮೈದಾನ, ಅಗ್ರಹಾರ ವೃತ್ತ, ದಾಸಪ್ಪ ವೃತ್ತ, ಫೈವ್ಲೈಟ್ ವೃತ್ತ, ಸಿದ್ದಾರ್ಥನಗರ ಹಾಗೂ ಬುಲೆವರ್ಡ್ ವೃತ್ತದಲ್ಲಿ ತಾತ್ಕಾಲಿಕ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.
ಬಾಕ್ಸ್
ದಸರಾ ಜಂಬೂ ಸವಾರಿಯಲ್ಲಿ ಕಳೆದ ವರ್ಷವೇ ಸುಮಾರು 12 ಲಕ್ಷ ಜನ ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ, ಭದ್ರತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ.
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ
