ಪಬ್ಲಿಕ್ ಅಲರ್ಟ್
ಮೈಸೂರು: ಬರ ಮತ್ತು ನೆರೆ ಸಮಸ್ಯೆಯಿಂದ ರೈತರು ಬಳಲುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರರವು ರೈತರ ಎಲ್ಲಾ ಬೆಳೆ ಸಾಲವನ್ನೂ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. ೧೮ರಂದು ಯಾದಗಿರಿಯಲ್ಲಿ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಕಳೆದ ೨೩ ವರ್ಷಗಳನ್ನು ಪರಿಶೀಲಿಸಿದಾಗ ರೈತರು ೧೭ ವರ್ಷ ಅತಿವೃಷ್ಟಿ, ೪ ವರ್ಷ ಬರ ಅನುಭವಿಸಿದ್ದಾರೆ. ಹವಾಮಾನ ವೈಫರಿತ್ಯದಿಂದಾಗಿ ಋತುಮಾನಗಳಲ್ಲಿ ಬದಲಾವಣೆ ಆಗುತ್ತಿದೆ. ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ನೀರಿನ ಸಮಸ್ಯೆ, ಬಿತ್ತನೆ ಬೀಜದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಲ್ಲಿ ಅನುಸರಿಸುತ್ತಿರುವ ಮಾನದಂಡ ಸರಿ ಇಲ್ಲ. ಕೂಡಲೇ ಬೆಳೆ ನಷ್ಟ ಅನುಭವಿಸಿದವ ರೈತರಿಗೆ ಎಕರೆಗೆ ೫೦ ಸಾವಿರ ರೂ. ಪರಿಹಾರ ನೀಡಬೇಕು. ಆಗಷ್ಟೇ ಮೊಳಕೆ ಹೊಡೆದು ನಾಶವಾದರೆ ಪರಿಹಾರ ನೀಡುವುದಿಲ್ಲ. ಈ ರೀತಿಯ ನಿಯಮದಿಂದಲೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರ ಬೆಳೆಯ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಜಿಎಸ್.ಟಿ ಸುಧಾರಣೆಯಿಂದ ರೈತರಿಗೆ ಹೆಚ್ಚೇನು ಲಾಭವಾಗಿಲ್ಲ. ಎಲ್ಲಾ ರೈತರು ತೊಂದರೆಯಲ್ಲಿ ಇರುವುದರಿಂದ ಈ ಬಾರಿ ಎಲ್ಲಾ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ ಎನ್.ಡಿ.ಆರ್.ಎಫ್ಮಾನದಂಡವನ್ನು ಬದಲಿಸಬೇಕು. ಈ ಅವೈಜ್ಞಾನಿಕ ಮಾನದಂಡಗಳಿಂದಾಗಿ ರೈತರಿಗೆ ತೊಂದರೆ ಆಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು ಮೊದಲಾದವರು ಇದ್ದರು.
