ರೈತರ ಬೆಳೆ ಸಾಲ ಪರಿಹಾರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ರೈತರ ಬೆಳೆ ಸಾಲ ಪರಿಹಾರವನ್ನು ಹೆಚ್ಚಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವವಹಿಸಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಶಾಸಕ, ಸಂಸದ, ಸಚಿವರು ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿಕೊಳ್ಳುತ್ತಾರೆ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಸಂಬಳ ಏರಿಕೆ ಮಾಡುತ್ತಾರೆ. ಆದರೆ, ರೈತರ ಬೆಳೆ ನಷ್ಟ ಪರಿಹಾರ ಮಾನದಂಡವನ್ನು ಎಂಟು ವರ್ಷವಾದರೂ ಏರಿಕೆ ಮಾಡುವುದಿಲ್ಲ. ಎಲ್ಲ ಜನಪ್ರತಿನಿಧಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆಂದರು.

ಮಳೆ, ಪ್ರವಾಹ ಹಾನಿಯಂತಹ ಪ್ರಕೃತಿ ವಿಕೋಪದ ಪರಿಣಾಮದಲ್ಲಿ ಉಂಟಾಗುವ ಬೆಳೆ ನಷ್ಟ ಪರಿಹಾರ ಎನ್ ಡಿ ಆರ್ ಎಫ್  ಮಾನದಂಡ ತಿದ್ದುಪಡಿ ಮಾಡಿ ಪರಿಹಾರ ಹೆಚ್ಚಳ ಮಾಡಲಿ. ಪ್ರಸಕ್ತ ಇರುವ ಪರಿಹಾರ ಅವೈಜ್ಞಾನಿಕವಾಗಿದೆ. ಮಳೆ ಆಶ್ರಯದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 25,000 ನೀರಾವರಿ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 40,000 ವಾಣಿಜ್ಯ ಬೆಳೆಗಳಿಗೆ ಎಕರೆಗೆ 60,000ಗಳಿಗೆ ಏರಿಕೆ ಮಾಡಲಿ. ಬೆಳೆ ನಷ್ಟದ ಪರಿಹಾರ ಎನ್ ಡಿ ಆರ್ ಎಫ್ ಮಾನದಂಡ ಕಳೆದ ಎಂಟು ವರ್ಷಗಳಿಂದ  ಅವೈಜ್ಞಾನಿಕವಾಗಿದ್ದು, ಪುನರ್ ಪರಿಶೀಲನೆ ಆಗಿಲ್ಲ. ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಿ ಎಂದರು.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಮಳೆ ಹಾನಿ ಪ್ರವಾಹ ಹಾನಿ ರೈತರ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಪಂಜಾಬ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್ 5000 ಕೋಟಿ ನೀಡಲಿ. ಈ ಬಗ್ಗೆ ರಾಜ್ಯದ ಕೇಂದ್ರ ಸಚಿವ, ಸಂಸದರು ಒತ್ತಾಯಿಸಲಿ. ಪ್ರಸಕ್ತವಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ಸಾಲ ಮನ್ನ ಮಾಡಲಿ ಎಂದು ಒತ್ತಾಯಿಸುತ್ತೇವೆಂದರು.
ಪತ್ರ ಸ್ವೀಕರಿಸಿದ ಹೆಡ್ ಕ್ವಾಟರ್ಸ್ ತಹಸೀಲ್ದಾರ್ ಶಿವಪ್ರಸಾದ್ ಹಾಗೂ ಜಿಲ್ಲಾ ಕೃಷಿ ಉಪ ನಿರ್ದೇಶಕ ರಾಜು ಮಾತನಾಡಿ ಜಿಲ್ಲಾಧಿಕಾರಿಗಳು  ಬೆಂಗಳೂರಿನಿಂದ ಬಂದ ತಕ್ಷಣ ಈ ಬಗ್ಗೆ ಚರ್ಚಿಸಿ ರೈತ ಮುಖಂಡರ ಸಭೆ ಕರೆಯುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಹಂಪಾಪುರ ರಾಜೇಶ್, ದೇವನೂರು ಮಹದೇವಪ್ಪ, ಕುರುಬೂರು ಪ್ರದೀಪ್, ರಂಗರಾಜ, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ಗಿರೀಶ್, ಕೂರ್ಗಳ್ಳಿ ರವಿಕುಮಾರ್, ನಂಜುಂಡಸ್ವಾಮಿ, ವಾಜಮಂಗಲ ಮಹದೇವು, ನಾಗೇಂದ್ರ.ಪಿ, ಪುಟ್ಟೇಗೌಡನಹುಂಡಿ ರಾಜು, ಮಾಸ್ಟರ್ ಶಿವಶಂಕರ್, ವರಕೋಡು ಜಯರಾಮ್,  ಕೆರ್ನಳ್ಳಿ ಬಾಲು ಇನ್ನು ಮುಂತಾದವರು ಇದ್ದರು.

Share This Article
Leave a Comment