ಪಬ್ಲಿಕ್ ಅಲರ್ಟ್
ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಹೋಬಳಿಯ ಕಲ್ಕೆರೆ ಗ್ರಾಮದ ಸ.ನಂ.122ರಲ್ಲಿರುವ ನನ್ನ ಜಮೀನು ಹಿಡುವಳಿ ಜಾಗವೆಂದು ದಾಖಲೆಗಳಿದ್ದರೂ ಅರಣ್ಯ ಇಲಾಖೆಯು ಅಕ್ರಮವಾಗಿ ವಶದಲ್ಲಿರಿಸಿಕೊಂಡಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿ ನ್ಯಾಯ ಒದಗಿಸಬೇಕು ಎಂದು ರೈತ ಎಚ್.ಎಸ್.ನಟರಾಜು ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ವೇ ನಂಬರ್ ನಲ್ಲಿ 5 ಎಕರೆ 29 ಗುಂಟೆ ಜಮೀನು ಹೊಂದಿದ್ದು, ಅಗತ್ಯ ದಾಖಲೆಗಳೂ ಇವೆ. ಏಕಾಏಕಿ ಈ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಿತು. ಈ ಬಗ್ಗೆ ಅಹವಾಲು ಸಲ್ಲಿಸಿದಾಗ ಮೈಸೂರು ವಿಭಾಗ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಜಾಗವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಆದರೆ ಇಂದಿಗೂ ಸಮಸ್ಯೆ ಪರಿಹಾರವಾಗಿಲ್ಲ. ಉನ್ನತ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲೋಕೇಶ್, ಕಾರ್ಯಧ್ಯಕ್ಷ ಮೋಹನ್ ರಾಜ್, ಪದಾಧಿಕಾರಿಗಳಾದ ರಾಜಶೇಖರ್, ರಾಜು ಇದ್ದರು.
