ನಾಯಕತ್ವ ಬದಲಾವಣೆ ಹೈಕಮಾಂಡ್‌ ನಿರ್ಧಾರ: ಎಚ್‌.ಸಿ.ಮಹದೇವಪ್ಪ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಯಕತ್ವ ಬದಲಾವಣೆ ವಿಚಾರ‌ದಲ್ಲಿ ಹೈಕಮಾಂಡ್‌ ಎಲ್ಲಾ ನಿರ್ಧಾರಗಳನ್ನು ಮಾಡುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. 
ಈ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರೆ ಮುಂದುವರೆಯುತ್ತಾರೆ. ಆಯಾಯಾ ಕಾಲಕ್ಕೆ ರಾಜಕೀಯ ನಿರ್ಧಾರಗಳನ್ನ ನಮ್ಮ ಹೈ ಕಮಾಂಡ್ ತೆಗೆದುಕೊಳ್ಳುತ್ತದೆ. ನಮಗೆ ಹೈ ಕಮಾಂಡ್ ಇದೆ. ಹೈ ಕಮಾಂಡ್ ಎಲ್ಲಾ ನಿರ್ಧಾರಗಳನ್ನ ಮಾಡುತ್ತದೆ. ಹೈ ಕಮಾಂಡ್ ಬಿಟ್ಟು ಉಳಿದವರು ಏನೇ ಮಾತನಾಡಿದರು ಅದರಲ್ಲಿ ಪ್ರಯೋಜನವೂ ಇಲ್ಲ ಅರ್ಥವೂ ಇಲ್ಲ ಎಂದು ತಿಳಿಸಿದರು.

ಯಶಸ್ವಿ ದಸರಾ ಮಾಡಿದ್ದೇವೆ. ಈ ಬಾರಿ ಜನರ ದಸರಾ ಆಗಿದೆ. 11 ದಿನದಲ್ಲಿ ಒಂದು ಸಾವಿರ ಟನ್ ಕಸ ಸಂಗ್ರಹ ಆಗಿತ್ತು. ಪೌರ ಕಾರ್ಮಿಕರ ಪರಿಶ್ರಮದಿಂದ ಇಡೀ ನಗರ ಸ್ವಚ್ಚವಾಗಿದೆ. ಪೌರಕಾರ್ಮಿಕರಿಗೆ ನನ್ನ ಮೊದಲ ಕೃತಜ್ಞತೆಗಳು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲರು ತಮ್ಮ ಮನೆಯ ಹಬ್ಬದ ರೀತಿ ದಸರಾ ಮಾಡಿದರು. ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ಅದನ್ನೆಲ್ಲ ಬಗೆ ಹರಿಸಿಕೊಂಡು ಯಶಸ್ವಿಯಾಗಿ ದಸರಾ ಮಾಡಿದ್ದೇವೆ. ನಮಗೆ ದಸರಾದಲ್ಲಿ ಯಾವ ರಾಜಕೀಯ ಅಜೆಂಡಾ ಇರಲಿಲ್ಲ. ಈಗಾಗಿ ಆತಂಕವಿಲ್ಲದೆ ದಸರಾ ಮಾಡಿದ್ದೇವೆ ಎಂದು ಹೇಳಿದರು.
ತೆರೆದ ಜೀಪ್‌ ನಲ್ಲಿ ಮೊಮ್ಮಗ ಸಿಎಂ ಅವರೊಟ್ಟಿಗೆ ಕಾಣಿಸಿಕೊಂಡಿರುವ ಕುರಿತು ಪ್ರತಿಕ್ರಯಿಸಿ, ಅಲ್ಲಿ ಯಾವ ಪ್ರೋಟೊಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೊಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಪೇರೆಡ್  ಅಲ್ಲ, ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳಕ್ಕೆ ತೆರಳಿ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್, ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಷೀಫ್, ಡಿಸಿಪಿ ಸುಂದರ್ ರಾಜು, ಬಿಂದುಮಣಿ ಸೇರಿ ಅನೇಕರು ಇದ್ದರು.

Share This Article
Leave a Comment