ಪಬ್ಲಿಕ್ ಅಲರ್ಟ್
ಮೈಸೂರು: ಶೌಚಾಲಯ, ತರಗತಿ ಕೊಠಡಿಯಲ್ಲಿ ಅಶುಚಿತ್ವ, ನೀರಿನ ಸಮಸ್ಯೆ ಸೇರಿ ಕಾಲೇಜಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಾಗೂ ಗ್ರಂಥಾಲಯ ಶುಲ್ಕ ಏರಿಕೆಯನ್ನು ಹಿಂಪಡೆಯುವಂತೆ ಕೋರಿ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಹೋರಾಟ ಸಮಿತಿವತಿಯಿಂದ ಕಾಲೇಜಿನ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಾಲೇಜಿನ ಆವರಣದಲ್ಲಿರುವ ಶೌಚಾಲಯವು ದುರ್ವಾಸನೆ ಬೀರುತ್ತದೆ.ಅಲ್ಲದೇ ಕೊಠಡಿಗಳಲ್ಲಿಯೂ ಕೂಡ ಶುಚಿತ್ವದ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಶೌಚಾಯಲ ಹಾಗೂ ಕೊಠಡಿಗಳನ್ನು ಪ್ರತಿನಿತ್ಯ ಸ್ವಚ್ಛತೆ ಇರುವ ವ್ಯವಸ್ಥೆ ಆಡಳಿತ ಮಂಡಳಿ ಮಾಡಲಿ ಎಂದು ಒತ್ತಾಯಿಸಿದರು.
ಜೂನಿಯರ್ ಬಿ.ಎ ಹಾಲ್ ಹಾಗೂ ಸೀನಿಯರ್ ಬಿ.ಎ ಹಾಲ್ನಲ್ಲಿ ಪಾರಿವಾಳಗಳು ಕೊಠಡಿಗಳನ್ನು ಗಲೀಜು ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಕೂರಲು ಹಿಂಜರಿಯುತ್ತಿದ್ದಾರೆ. ಅಲ್ಲದೇ ನೆಮ್ಮದಿಯಿಂದ ಕೂತು ತರಗತಿಯನ್ನು ಕೇಳಲು ಸಾಧ್ಯವಾಗುತ್ತಿಲ್ಲ. ಕೊಠಡಿಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಕಾಲೇಜಿನ ನಿರ್ವಹಣಾ ಮಂಡಳಿ ನಿರ್ಲಕ್ಷೆ ತೋರುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಗ್ರಂಥಾಲಯ ಶುಲ್ಕವನ್ನು ಪಡೆಯಲಾಗಿದೆ. ಈಗ ಮತ್ತೆ ಲೈಬ್ರರಿ ಕಾರ್ಡ್ ಹೆಸರಿನಲ್ಲಿ ಮತ್ತೆ ಶುಲ್ಕವನ್ನು ಪಡೆಯುತ್ತಿರುವುದು ಸರಿಯಲ್ಲ. ಈ ಶುಲ್ಕವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತರಗತಿ ಕೊಠಡಿಗಳನ್ನು, ಶೌಚಾಲಯವನ್ನು ಕುಡಿಯುವ ನೀರಿನ ಘಟಕವನ್ನು ಸ್ವಚ್ಛಗೊಳಿಸಬೇಕು ಹಾಗೂ ಪ್ರತಿದಿನ ಸ್ವಚ್ಛವಾಗಿರುವಂತೆ ಖಾತ್ರಿಪಡಿಸಬೇಕೆಂದು ಮತ್ತು ಲೈಬ್ರರಿ ಕಾರ್ಡ್ ಶುಲ್ಕವನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದೀಪಕ್, ಗಂಗಾಧರ್, ಅಭಿಶಂಕರ್, ಕೃಷ್ಣ, ಶಿವಲಿಂಗ ಮತ್ತಿತರರು ಪಾಲ್ಗೊಂಡಿದ್ದರು.
