ಪಬ್ಲಿಕ್ ಅಲರ್ಟ್
ಮಂಡ್ಯ,ಅ.13- ಜಿಲ್ಲೆಯಲ್ಲಿ ನೂತನವಾಗಿ 101 ಮತಗಟ್ಟೆ ಸ್ಥಾಪನೆಗೆ ಚುನಾವಣೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡನೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1200 ಕ್ಕಿಂತ ಹೆಚ್ಚು ಜನರಿರುವ ಮತಗಟ್ಟೆಗಳು ಹಾಗೂ ಮತದಾರರ ವಾಸಸ್ಥಳದಿಂದ 2 ಕಿ.ಮೀ ಗಿಂತಲೂ ಹೆಚ್ಚು ಅಂತರವಿರುವ ಮತಗಟ್ಟೆಗಳನ್ನು ಪುನರ್ ವಿಂಗಡನೆ ಮಾಡಬಹುದು. 1200 ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿತು. ಈ ನಿಟ್ಟಿನಲ್ಲಿ ಈಗ 101 ಹೊಸ ಮತಗಟ್ಟೆಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಯಾವುದೇ ಖಾಸಗಿ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಿಲ್ಲ ಎಲ್ಲಾ ಮತಗಟ್ಟೆಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ಮಾತ್ರ ಮಾಡಲಾಗಿದೆ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಾದ ಮೇಲುಕೋಟೆ (7), ಶ್ರೀರಂಗಪಟ್ಟಣ (1), ನಾಗಮಂಗಲ (1) ಗಳಲ್ಲಿ ದುರಸ್ಥಿಗೊಂಡಿದ್ದ ಒಟ್ಟು ಮತಗಟ್ಟೆಗಳನ್ನು ಬದಲಾವಣೆ ಮಾಡಲು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಗ್ರ ಪರಿಷ್ಕರಣೆಯಲ್ಲಿ ಮಾಹಿತಿ ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು
23 ವರ್ಷಗಳ ನಂತರ ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ, ಮತದಾರರ ಸಮಗ್ರ ಪರಿಶೀಲನೆ ವೇಳೆ ಪ್ರತಿ ಮನೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದು 2025ನೇ ಸಾಲಿನ ಮತದಾರರ ಪಟ್ಟಿಯಲ್ಲಿ ಲಭ್ಯವಿರುವ ಎಲ್ಲಾ ಮತದಾರರಿಗೂ ಗಣತಿ ನಮೂನೆಯನ್ನು ನೀಡುತ್ತಾರೆ, ಈ ನಮೂನೆಯಲ್ಲಿ ಮತದಾರರ ಭಾವಚಿತ್ರ, ಹೆಸರು ಅಥವಾ ಯಾವುದೇ ತಿದ್ದುಪಡಿಗಳು ಇದ್ದಲ್ಲಿ ಸೂಕ್ತ ದಾಖಲಾತಿಯೊಂದಿಗೆ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಿ ನಿಮ್ಮ ಹೆಸರು, ವಿಳಾಸ, ವಯಸ್ಸು ಹಾಗೂ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದರು.
ಮತದಾರರು ನಮೂನೆಯನ್ನು ಭರ್ತಿ ಮಾಡದೇ ಇದ್ದಲ್ಲಿ ಮತದಾರರ ಪಟ್ಟಿಯಿಂದ ಈ ಮತದಾರರನ್ನು ನಿಯಮಾನುಸಾರ ಕೈ ಬಿಡಲಾಗುವುದು. ಆದ್ದರಿಂದ ಈ ಕಾರ್ಯಕ್ರಮವು ಯಾವುದೇ ಲೋಪದೋಷಗಳು ಇಲ್ಲದಂತಹ ಆರೋಗ್ಯಯುತ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಹಾಗೂ ಮತದಾರರು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಿಸಲು ತಮ್ಮ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿ.ಶಿವಾನಂದ ಮೂರ್ತಿ ಮಾತನಾಡಿ ಪ್ರತಿ ಮತಗಟ್ಟೆಗಳಲ್ಲಿ ಮೇಲ್ವಿಚಾರಣೆ ಮಾಡಲು ತಮ್ಮ ತಮ್ಮ ಪಕ್ಷಗಳ ಬೂತ್ ಲೆವಲ್ ಏಜೆಂಟರ್ಗಳನ್ನು ನೇಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಮತಗಟ್ಟೆ ಅಧಿಕಾರಿಗಳ ಸಮನ್ವಯದೊಂದಿಗೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಿರ್ವಹಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ರವಿಶಂಕರ್, ಕಾಂಗ್ರೆಸ್ ಪಕ್ಷದ ಸುಂಡಹಳ್ಳಿ ಮಂಜುನಾಥ್, ಜೆ.ಡಿ ಎಸ್ ಪಕ್ಷದ ನವೀನ್, ಬಿ.ಎಸ್.ಪಿ ಪಕ್ಷದ ದಿನೇಶ್, ಎಎಪಿ ಪಕ್ಷದ ಬೊಮ್ಮಯ್ಯ ಉಪಸ್ಥಿತರಿದ್ದರು.
