ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾಗಿದ್ದ ನಿವೇಶನದ ಹಗರಣದ ತನಿಖೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನ್ಯಾ.ಪಿ.ಎನ್.ದೇಸಾಯಿ ಆಯೋಗಕ್ಕೆ ಒದಗಿಸಲಾಗಿದ್ದ ಸೌಲಭ್ಯವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ ಎನ್ನಲಾಗಿದೆ.
ಮೊದಲ ಬಾರಿಗೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಕಚೇರಿ ತೆರೆದು ಪ್ರಾಧಿಕಾರದಿಂದ ದೇಸಾಯಿ ಆಯೋಗಕ್ಕೆ ಪ್ರಕರಣದ ತನಿಖೆ ನಡೆಸಲು ಅಗತ್ಯವಿದ್ದ ಸಕಲ-ಸೌಲಭ್ಯಗಳನ್ನು ಒದಗಿಸಲಾಗಿತ್ತು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ೨೦೨೪ರ ಜುಲೈ ೨ ರಂದು ಮೈಸೂರಿಗೆ ವಿಶೇಷ ವಿಮಾನದಲ್ಲಿ ಬಂದು ತರಾತುರಿಯಲ್ಲಿ ಮುಡಾ ಕಛೇರಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದರು. ಅದೇ ದಿನ ಸಂಜೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆಯೇ ಮುಡಾ ನಿವೇಶನ ಹಗರಣ ಆರೋಪ ಸಂಬಂಧ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾ. ಪಿ.ಎನ್. ದೇಸಾಯಿ ಅವರ ನೇತೃತ್ವದ ಆಯೋಗವನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ತದನಂತರ ಆಯೋಗಕ್ಕೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದ ಸುಸಜ್ಜಿತ ಕೊಠಡಿಯೊಂದನ್ನು ಕಛೇರಿಯನ್ನಾಗಿ ಮಾಡಿಕೊಂಡು ಅಲ್ಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೀಠೋಪಕರಣ, ಲೇಖನ ಸಾಮಗ್ರಿ, ಕಂಪ್ಯೂಟರ್-ಲ್ಯಾಪ್ಟಾಪ್, ಪ್ರಿಂಟರ್ಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲಾಗಿತ್ತಲ್ಲದೇ, ಮುಡಾ ಕಛೇರಿಯಿಂದ ನ್ಯಾಯಮೂರ್ತಿಗಳು ಕೇಳಿದಂತೆ ಪ್ರತಿನಿತ್ಯ ನಿವೇಶನಗಳ ಕುರಿತಾದ ಮೂಲ ಕಡತಗಳನ್ನು ಅಭಿಲೇಖಾಯದಿಂದ ತೆಗೆದು ಸಭಾಂಗಣದಲ್ಲಿ ಪ್ರತಿ ದಾಖಲೆಗಳನ್ನು ಜೆರಾಕ್ಸ್ ಮಾಡಿ ಸಂಬAಧಪಟ್ಟ ವಿಶೇಷ ತಹಶೀಲ್ದಾರ್ಗಳು ದೃಢೀಕರಿಸಿ ವಾಹನದ ಮೂಲಕ ಬೆಂಗಳೂರಿಗೆ ರವಾನಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಸಾವಿರಾರು ಕಡತಗಳ ಲಕ್ಷಾಂತರ ಹಾಳೆ (ಶೀಟ್) ಗಳನ್ನು ಜೆರಾಕ್ಸ್ ಮಾಡಿಸಿ ಕಳುಹಿಸಲಾಗಿತ್ತು.
ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ತನಿಖೆ ನಡೆಸಿದ ಆಯೋಗವೂ ಇತ್ತೀಚೆಗಷ್ಟೇ ಸರ್ಕಾರಕ್ಕೆ ಮುಡಾದ ಶೇಕಡಾ ೫೦:೫೦ ಅನುಪಾತದ ನಿವೇಶನ ಮಾರಾಟದಲ್ಲಿ ನಡೆದಿದೆ ಎನ್ನಲಾದ ಬಾರಿ ಅವ್ಯವಹಾರ ಕುರುತಂತೆ ವರದಿಯನ್ನು ಸಲ್ಲಿಸಿದೆ. ಅಂದರೆ ನಿಯೋಜನೆ ಮಾಡಿದ್ದ ಆಯೋಗವು ತನ್ನ ತನಿಖೆಯನ್ನು ಪೂರ್ಣಗೊಳಿಸಿದಂತಾಗಿದ್ದು, ಅದಕ್ಕಾಗಿ ಒದಗಿಸಿದ್ದ ಸೌಲಭ್ಯಗಳನ್ನು ಹಿಂಪಡೆಯುವಂತೆ ನ್ಯಾ. ದೇಸಾಯಿರವರು ಈಗಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ದ ಆಯುಕ್ತ ಕೆ.ಆರ್. ರಕ್ಷಿತ್ ರವರಿಗೆ ಪತ್ರ ಬರೆದಿದ್ದರು. ಹಾಗೆಯೇ ಕುಮಾರ ಕೃಪದ ಕಛೇರಿಯನ್ನು ಬಂದ್ ಮಾಡಿಕೊಂಡು ಅತಿಥಿ ಗೃಹಕ್ಕೆ ಕೊಠಡಿಯನ್ನು ಒಪ್ಪಿಸುವಂತೆ ಅವರು ತಿಳಿಸಿದ್ದರು.
ಅದರನ್ವಯ ಆಯುಕ್ತರ ನಿರ್ದೇಶನದಂತೆ ಎಂಡಿಎ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್ತ ಕುಮಾರ್ ಅವರು ವಾರದ ಹಿಂದ ಷ್ಟೇ ಬೆಂಗಳೂರಿಗೆ ತೆರಳಿ ಕುಮಾರ ಕೃಪ ಅತಿಥಿ ಗೃಹದ ಕೊಠಡಿಯಲ್ಲಿ ತನಿಖಾ ಆಯೋಗಕ್ಕೆ ಒದಗಿಸಲಾಗಿದ್ದ ಸೌಲಭ್ಯಗಳನ್ನು ವಾಪಸ್ ಪಡೆದು ಪ್ರಾಧಿಕಾರದ ಕಛೇರಿ ಸ್ಟೋರ್ ರೂಮ್ನಲ್ಲಿ ಇರಿಸಿ ಬೀಗ ಮುದ್ರೆ ಮಾಡಿ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ. ತನಿಖಾ ಆಯೋಗಕ್ಕೆ ದೇಸಾಯಿ ಸೇರಿದಂತೆ ಇಬ್ಬರು ನ್ಯಾಯಾಧೀಶರು, ಒರ್ವ ಕಛೇರಿ ಅಧೀಕ್ಷಕ, ಮೂವರು ಸಿಬ್ಬಂದಿ ಹಾಗೂ ಮೂರು ವಾಹನಗಳ ಚಾಲಕರಿಗೆ ಕಳೆದ ೨೦೨೪ರ ಜುಲೈ ಮಾಹೆಯಿಂದ ಇದುವರೆಗೆ ಸಂಬಳ, ಟಿಎ, ಡಿಎ ಹಾಗೂ ಇನ್ನಿತರ ಸೌಲಭ್ಯ, ಕುಮಾರ ಕೃಪ ಹೋಟೆಲ್ ಕೊಠಡಿಯ ಬಾಡಿಗೆ, ವಿದ್ಯುತ್ ಬಿಲ್, ನ್ಯೂಸ್ ಪೇರ್ಸ್ ಬಿಲ್, ನ್ಯಾಯಮೂರ್ತಿಗಳು ಹಾಗೂ ಸಿಬ್ಬಂಧಿಗಳಿಗೆ ತಿಂಡಿ, ಊಟದ ಖರ್ಚು, ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್ಗಳ ನಿರ್ವಹಣೆ ಸೇರಿದಂತೆ ಇದುವರೆಗೆ ಬರೋಬರಿ ೫ ಕೋಟಿ ರೂ ಹಣ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಆದೇಶದಂತೆ ತನಿಖಾ ಆಯೋಗದ ಕಛೇರಿ ಖರ್ಚನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವೇ ಭರಿಸಿದೆ. ಆದರೆ, ತನಿಖಾ ವರದಿಯನ್ನು ಗಮನಿಸಿದಾಗ ಒಟ್ಟಾರೆ ಹಗರಣಕ್ಕೆ ಸಂಧಿಸಿದ ನಿಖರ ಸತ್ಯಾಂಶ ಹೊರಬೀಳದಿರುವುದು ವಿಪರ್ಯಾಸವೇ ಸರಿ.
