ಪಬ್ಲಿಕ್ ಅಲರ್ಟ್
ಮೈಸೂರು: ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಮೈಸೂರು, ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ, ನಾಯಕ ಪಡೆ ಸಂಘಟನೆಯ ಸಾವಿರಾರು ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಕೆ.ಎನ್.ರಾಜಣ್ಣ ಪರ ಶಕ್ತಿ ಪ್ರದರ್ಶಿಸಿದರು.
ಶುಕ್ರವಾರ ಬೆಳಗ್ಗೆ ನಗರದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ಮುಖಂಡರು ಬಳಿಕ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಂ.ರಾಮಚಂದ್ರ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಡೆದ ವಾಸ್ತವಾಂಶವನ್ನು ಹೇಳಿದ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದು ಸರಿಯಲ್ಲ, ಅನೇಕ ಮುಖಂಡರು ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಅವರನ್ನು ಏಕೆ ಸಂಪುಟದಿಂದ ವಜಾಗೊಳಿಸಿಲ್ಲ, ಕೆಲವು ಮುಖಂಡರು ನಾಯಕ ಸಮಾಯದ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ ಮುಖ್ಯಮಂತ್ರಿಗಳು ಕೂಡಲೇ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.
ಉಪಾಧ್ಯಕ್ಷರಾದ ಕೆಂಪನಾಯಕ ಅವರು ಮಾತನಾಡಿ, ನಾಯಕ ಸಮುದಾಯದ ಮುಖಂಡರಾದ ಕೆ.ಎನ್.ರಾಜಣ್ಣರವರನ್ನು ದಿಢೀರನೇ ಸಚಿವ ಸಂಘಟದಿಂದ ವಜಾಮಾಡಿರುವುದು ನಾಯಕ ಸಮುದಾಯಕ್ಕೆ ಮಾಡಿದ ಘೋರ ಅಪಮಾನ, ಕೂಡಲೇ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಬೇಕು. ರಾಜಣ್ಣ ಅವರು ನಾಯಕ ಜನಾಂಗದ ಧೀಮಂತ ಹಾಗೂ ಪ್ರಭಾವಿ ಮುಖಂಡರು. ನೇರ ನಡೆ, ನುಡಿ, ದಿಟ್ಟ ಹೋರಾಟಗಾರರಾದ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ನಾಯಕ ಜನಾಂಗಕ್ಕೆ ಮಾಡಿರುವ ಘನ ಘೋರ ಅನ್ಯಾಯವಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಾಯಕ ಸಮುದಾಯದ ರಾಜಕೀಯ ಮುಖಂಡರನ್ನು, ಅಧಿಕಾರಿಗಳನ್ನೆ ಟಾರ್ಗೆಟ್ ಮಾಡಲಾಗುತ್ತಿದೆ. ಕೂಡಲೇ ಮುಖ್ಯಮಂತ್ರಿಗಳು ಹೈಕಮಾಮಡ್ ಜತೆ ಚರ್ಚೆ ನಡೆಸಿ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರಭಲ ಕೋಮಿನ ರಾಜಕೀಯ ಮುಖಂಡರು ಪಕ್ಷ ವಿರೋಧಿ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡ
ಉದಾಹರಣೆಗಳಿಲ್ಲ. ಆದರೆ ನಾಯಕ ಸಮುದಾಯದವರನ್ನ ಏಕಾ-ಏಕಿ ವಜಾಮಾಡಿರುವುದು ಖಂಡನೀಯ ಈ ಕೂಡಲೇ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆಮಾಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾಯಕ ಸಮುದಾಯವು ಪಕ್ಷದಿಂದ ದೂರವಾಗುವ ಸಂಭವ ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ವಿವಿಧ ಸಂಘಟನೆಗಳ
ಮುಖಂಡರಾದ ಮಹದೇವನಾಯಕ, ಆರ್.ರಾಚಪ್ಪ, ಕುಂಬರಹಳ್ಳಿ ಸುಬ್ಬಣ್ಣ, ಶ್ರೀನಿವಾಸ ನಾಯಕ, ದ್ಯಾವಪ್ಪ ನಾಯಕ, ಕೆಂಪನಾಯಕ, ಅಣ್ಣಯ್ಯ ನಾಯಕ, ವಿನೋದ್ ನಾಗಾವಾಲ, ಮಾಜಿ ಕಾರ್ಪೋರೇಟರ್ ರವಿಂದ್ರ ಕುಮಾರ್, ಮಹದೇವಸ್ವಾಮಿ, ಪ್ರಭಾಕರ್ ಮತ್ತಿತರರು ಇದ್ದರು.
ಮೈಸೂರಿನಲ್ಲಿ ಕೆ.ಎನ್.ರಾಜಣ್ಣ ಪರ ಶಕ್ತಿ ಪ್ರದರ್ಶನ

Leave a Comment
Leave a Comment