ಪಬ್ಲಿಕ್ ಅಲರ್ಟ್
ಮೈಸೂರು: ನಾಡಿನ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ, ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲ ಘೋಷಿಸಿ ಕಾವೇರಿ ಕ್ರಿಯಾಸಮಿತಿಯಿಂದ ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ ಚಲೋ ಧರ್ಮಸ್ಥಳ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಚಾಲನೆ ನೀಡಿದರು.
ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಾದ್ಯಂತ ಕೊಟ್ಯಂತರ ಭಕ್ತರ ಪೂಜನೀಯ ಸ್ಥಳವಾದ ಧರ್ಮಸ್ಥಳಕ್ಕೆ ಇದೀಗ ಸಾಕಷ್ಟು ಅಪಪ್ರಚಾರ ನಡೆದಿದೆ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಬಂದಿದೆ. ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಮತ್ತು ವಿವಿಧ ಸಂಘಟನೆಗಳ ಮುಖಂಡರು ಇಂದು ಧರ್ಮಸ್ಥಳಕ್ಕೆ ಯಾತ್ರೆ ಮಾಡುವ ಮೂಲಕ ಶ್ರೀಗಳಿಗೆ ನೈತಿಕ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಹಾಗೂ ನಟ ಜಯಪ್ರಕಾಶ್ ಮಾತನಾಡಿ, ಧರ್ಮಸ್ಥಳ ಸೇರಿ ಹಿಂದೂ ದೇವಾಲಯಗಳ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಇಂದು ಯಾತ್ರೆ ಕೈಗೊಂಡಿದ್ದೇವೆ. ಧರ್ಮಸ್ಥಳ ಧರ್ಮಾಧಿಕಾರಿಯವರನ್ನು ಭೇಟಿ ಮಾಡಿ ಅವರಿಗೆ ನೈತಿಕ ಬೆಂಬಲ ಘೋಷಿಸಲಿದ್ದೇವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾವೇರಿ ಕ್ರಿಯಾ ಸಮಿತಿ ಹೋರಾಟಗಾರರಾದ ತೇಜಸ್ ಲೋಕೇಶ್ಗೌಡ, ಗೋಲ್ಡನ್ ಸುರೇಶ್, ಸಿಂಧುವಳ್ಳಿ ಶಿವಕುಮಾರ್,ಕೃಷ್ಣಪ್ಪ, ಶಿವಲಿಂಗು,ಕುಮಾರ್ಗೌಡ, ಮಂಜುಳ, ನೇಹ, ಭಾಗ್ಯಮ್ಮ, ಪ್ರಭುಶಂಕರ್, ರಘು ಅರಸ್, ಹನುಮಂತಯ್ಯ,ಮಹೇಶ್ಗೌಡ, ಸಿದ್ದೇಗೌಡ, ಶ್ರೀನಿವಾಸ, ಪ್ರಭಾಕರ್ ಇತರರು ಇದ್ದರು.
