ಸೆ.೨೨ರಿಂದ ನವರಾತ್ರಿ ರಂಗೋತ್ಸವ ಸಂಭ್ರಮ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ರಂಗಾಯಣದ ವತಿಯಿಂದ ನವರಾತ್ರಿ ರಂಗೋತ್ಸವನ್ನು ಹಮ್ಮಿಕೊಳ್ಳಲಾಗಿದ್ದು, ಸೆ.22 ರಿಂದ 10 ದಿನಗಳ ಕಾಲ ನಾಟಕಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ರಂಗಾಯಣದ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಂಗೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೆ.22ರಂದು ಸಂಜೆ 5.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್,ತಂಗಡಗಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಿದ್ದಾರೆ‌. ಸೆ.22 ರಿಂದ ಅಕ್ಟೋಬರ್ 1 ರವರೆಗೆ ರಂಗಾಯಣದ ವನರಂಗದಲ್ಲಿ ಪ್ರತಿ ಸಂ.5.30ಕ್ಕೆ ಅಂತರರಾಜ್ಯ  ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವಿದ್ದು, ಸಂ.7ಗಂಟೆಗೆ ಭೂಮಿಗೀತದಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.
ನಾಟಕಗಳ ವಿವರ: ಸೆ.22ಕ್ಕೆ ಮಂಜುನಾಥ್‌ ಬಿಳಕೆರೆ ರಚನೆ, ಶಕುಂತಲ ಹೆಗಡೆ ನಿರ್ದೇಶನದ ಶರೀಫ, ಸೆ.23ರಂದು ಕವಾದ ವಿನೋದ್‌ ರಂಗತಂಡದ ನೇಮಿ ಚಂದ್ರ ರವರ ಕಾದಂಬರಿ ಆಧಾರಿತ ನೋವಿಗದ್ದಿದ ಕುಂಚ ನಾಟಕ ಪ್ರದರ್ಶನವಾಗಲಿದೆ. ಸೆ.24ಕ್ಕೆ ಹೂಲಿ ಶೇಖರ್‌ ರಚನೆಯ, ಕೊಳ್ಳೇಗಾಲದ ಎನ್‌.ಅಂಕರಾಜು ನಿರ್ದೇಶನದ ರಾಕ್ಷಸ, ಸೆ.೨೫ಕ್ಕೆ ಡಾ.ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ರಚನೆಯ, ಎಎಸ್‌.ಸುಭಾಷ್‌ ನಿರ್ದೇಶನದ ಚಿತ್ರಪಟ ರಾಮಾಯಣ ಇರಲಿದೆ. ಸೆ. ೨೬ಕ್ಕೆ ಬೀಚಿ ಬರಹಗಳನ್ನಾಧರಿಸಿದ  ಶ್ರೀ ತಿಮ್ಮಾರ್ಪಣಮಸ್ತು, 27 ರಂದು ಕಲ್ಯಾಣದ ಬಾಗಿಲು, 28 ಚೂರಿಕಟ್ಟೆ ಅಥಾರ್ತ್ ಕಲ್ಯಾಣಪುರ, 29ಕ್ಕೆ ಮಾದಾರಿ ಮಾದಯ್ಯ, 30ಕ್ಕೆ ಜಾತ್ರೆ, ಅ.1ರಂದು ಜನ ಗಣ ಮನ ನಾಟಕ ತೆರೆಕಾಣಲಿದೆ.
ಜಾನಪದ ನೃತ್ಯ: ಲಂಬಾಡಿ/ಮಾತುರಿ ನೃತ್ಯ(ತೆಲಂಗಾಣ), ಲಾವಣಿ, ಹೋಲಿ ನೃತ್ಯ(ಮಹಾರಾಷ್ಟ್ರ), ಸಿದ್ದಿ ಢುಮಾಲ್ ನೃತ್ಯ(ಗುಜರಾತ್), ಸಂಬಲ್ ಪುರಿ ನೃತ್ಯ(ಒರಿಸ್ಸಾ), ತಿರುವತ್ತುರಕಳಿ ಮತ್ತು ಒಪ್ಪಾನ ನೃತ್ಯ(ಕೇರಳ), ಬಿಹು, ಗುಸಾನ್ ನೃತ್ಯ(ಅಸ್ಸಾಂ), ನೋರ್ತಾ ಮತ್ತು ಸೈತಾನ್ ನೃತ್ಯ(ಮಧ್ಯಪ್ರದೇಶ್), ರಥ್ವಾ ನೃತ್ಯ(ಗುಜರಾಜ್), ತಪ್ಪಾಟ್ಟಗುಳು ನೃತ್ಯ(ಆಂಧ್ರಪ್ರದೇಶ), ಕರಗಂ, ಕಾವಾಡಿ, ತಪ್ಪಟ್ಟಮ್ ನೃತ್ಯ(ತಮಿಳುನಾಡು)ಗಳು ಇರಲಿವೆ. 
ಸುದ್ದಿಗೋಷ್ಟಿಯಲ್ಲಿ ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸಂಚಾಲಕಿ ಕೆ.ಆರ್‌.ನಂದಿನಿ ಹಾಗೂ ಬಿ.ಎನ್ ಶಶಿಕಲಾ ಹಾಜರಿದ್ದರು.

Share This Article
Leave a Comment