ಇಂದಿನಿಂದ ಮಾರ್ಷಲ್ ಆರ್ಟ್ಸ್‌ ಪಂದ್ಯಾವಳಿ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಸೆ.೩೦ ಮಂಗಳವಾರ ಬೆಳಗ್ಗೆ ಹೆಸರಾಂತ ಕರಾಟೆ ಪಟುಗಳಾದ ರ‍್ಯಾಂಬೋ ಕಿರಣ್, ಕೃಷ್ಣಮೂರ್ತಿ ಜಸ್ವಂತ್ ನೇತೃತ್ವದಲ್ಲಿ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ರ‍್ಯಾಂಬೋ ಕಿರಣ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸೆ.೩೦ರಂದು ಮಂಗಳವಾರ ಬೆಳಗ್ಗೆ ೧೧.೩೦ಕ್ಕೆ ಮಹಾರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಇದೇ ಮೊದಲ ಬಾರಿಗೆ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿ ನಡೆಸುತ್ತಿದ್ದೇವೆ. ಪಂದ್ಯಾವಳಿಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಇದೊಂದು ವಿಭನ್ನವಾದ ಕ್ರೀಡಾಕೂಟವಾಗಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕರಾಟೆ, ಕುಂಗ್‌ಫು, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಜುಡೊ, ಟೆಕ್ವೆಂಡೋ, ಕುಸ್ತಿ ಮುಂತಾದ ಎಲ್ಲ ರೀತಿಯ ಸಮರ ಕಲೆಗಳನ್ನು ಅಭ್ಯಾಸ ಮಾಡಿದವರಾಗಿರುತ್ತಾರೆ. ಈ ಪಂದ್ಯಾವಳಿಯ ಫಲಿತಾಂಶ ಪ್ರಕಟಿಸುವ ರೆಫರಿಗಳೂ ಸಹ ಪರಿಪೂರ್ಣರಾಗಿದ್ದು, ಸಂಜೆ ೩ ಗಂಟೆ ತನಕವೂ ಪಂದ್ಯಾವಳಿ ನಡೆಯುತ್ತದೆ. ಸಭಿಕರಿಗೆ ಮೈ ನವಿರೇಳಿಸುವ ಸಾಹಸಗಳನ್ನು ನೋಡುವ ಸುರ್ಣಾವಕಾಶ ಲಭಿಸಲಿದೆ ಎಂದರು.
ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು ೪೦ಕ್ಕೂ ಹೆಚ್ಚು ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಕ್ರೀಡಾಪಟುಗಳು ಪಂದ್ಯಾವಳಿಗೆ ಆಗಮಿಸಿಲಿದ್ದಾರೆ. ಈ ಪಂದ್ಯಾವಳಿಯನ್ನು ಸಂಸದರಾದ ಸುನೀಲ್ ಬೋಸ್, ಉದ್ಘಾಟನೆ ಮಾಡಲಿದ್ದು, ಶಾಸಕ ದರ್ಶನ್ ದ್ರುವನಾರಾಯಣ, ಪದ್ಮಶ್ರೀ ಪುರಸ್ಕೃತ ಕಲಾವಿದ ಡಾ.ಹಾಸನ ರಘು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಆರ್.ಚೇತನ್, ಮೈಸೂರು ಡಿಸಿಪಿ ಸುಂದರ್‌ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಡಾ.ವೆಂಕಟೇಶ್, ಡಿಸಿಪಿ ಶಿವರಾಜ್, ಡಾ.ಪ್ರಸಾದ್, ಡಾ.ಲಯನ್ ವೆಂಕಟೇಶ್, ಪ್ರೊ.ಮಹದೇವ ಭರಣಿ, ಸಹನಾ ಶಿವಪ್ಪ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದರು.
ವಿಶೇಷ ಆಹ್ವಾನಿತರಾಗಿ ಅಂತಾರಾಷ್ಟ್ರೀಯ ತೀರ್ಪುಗಾರರಾದ ಅಬ್ದುಲ್ ಮುನೀರ್, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ನವೀನ್ ಸಹ ಆಗಮಿಸಲಿದ್ದಾರೆ. ಕರ್ನಾಟಕ ರಾಜ್ಯ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ  ಶ್ರೀನಿವಾಸ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಜೇತರಿಗೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರಮಾಣಪತ್ರ ಮತ್ತು ಮೆಡಲ್ ನೀಡಲಾಗುವುದು ಎಂದು ವಿವರಣೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಕರಾಟೆ ಪಟುಗಳಾದ ಶ್ರೀನಿವಾಸ ರೆಡ್ಡಿ, ಕೃಷ್ಣಮೂರ್ತಿ, ಸುನೀಲ್, ಶಶಿಕುಮಾರ್, ಅಂಬರೀಶ್ ಮುಂತಾದವರು ಇದ್ದರು.

ಕೋಟ್
ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಒಂದು ಪ್ರಮಾಣಿಕೃತ ವಿಭಿನ್ನವಾದ ಕ್ರೀಡೆ, ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕರಾಟೆ, ಕುಂಗ್‌ಫು, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಜುಡೊ, ಟೆಕ್ವೆಂಡೋ, ಕುಸ್ತಿ ಮುಂತಾದ ಎಲ್ಲ ರೀತಿಯ ಸಮರ ಕಲೆಗಳನ್ನು ಅಭ್ಯಾಸ ಮಾಡಿದವರಾಗಿರುತ್ತಾರೆ. ಎಲ್ಲ ರೀತಿಯ ಮುಂಜಾಗ್ರತೆ ವಹಿಸಲಾಗಿದೆ.
-ರ‍್ಯಾಂಬೋ ಕಿರಣ್, ಕರಾಟೆ ಪಟು

Share This Article
Leave a Comment