ಪಬ್ಲಿಕ್ ಅಲರ್ಟ್
ಮೈಸೂರು: ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಕಾಯ್ದೆ ಅನ್ವಯ ಟೆಂಡರ್ ಹೊರತುಪಡಿಸಿ ಪ್ರತಿ ವರ್ಷವೂ ಕೂಲಿ ಹೆಚ್ಚಳಕ್ಕೆ ನಿಯಮ ರೂಪಿಸಬೇಕು ಎಂದು ರಾಜ್ಯ ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವರದರಾಜೇಂದ್ರ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಟೆಂಡರ್ ಜಾರಿಯಾಗಿರುವ ತಾಲ್ಲೂಕುಗಳಲ್ಲಿ ಕ್ವಿಂಟಲ್ಗೆ ₹23.62, ಜಾರಿಯಾಗದ ತಾಲ್ಲೂಕುಗಳಲ್ಲಿ 10.92 ಕೂಲಿ ನೀಡಲಾಗುತ್ತಿದೆ. ಈ ತಾರತಮ್ಯ ನಿಲ್ಲಬೇಕು. ಹಾಗೆಯೇ 2015ರ ಟೆಂಡರ್ ನಿಯಮಾವಳಿಯಲ್ಲಿ ಜಾರಿಗೆ ಬಂದ ಇಎಸ್ಐ ಮತ್ತು ಇಪಿಎಫ್ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರಿಗೆ ದೊರೆತಿಲ್ಲ, ಈ ಬಗ್ಗೆಯೂ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಅಕ್ಕಿ ನೀಡುವುದರೊಂದಿಗೆ ಇಂದಿರಾಕಿಟ್ ಯೋಜನೆ ತಂದಿರುವುದನ್ನು ಸ್ವಾಗತಿಸುತ್ತೇವೆ. ಆದರೆ ನೇರವಾಗಿ ನ್ಯಾಯಬೆಲೆ ಅಂಗಡಿಗೆ ಸರಬರಾಜು ಮಾಡುವ ಉದ್ದೇಶ ನಮ್ಮ ದುಡಿಮೆಯನ್ನು ಹಾಳುಮಾಡಲಿದೆ. ಲೋಡಿಂಗ್ ಮತ್ತು ಅನ್ಲೋಡಿಂಗ್ಗೆ ಪ್ರತ್ಯೇಕ ದರವನ್ನೂ ನಿಗದಿ ಮಾಡಬೇಕು. ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಕಡಿತ ಮಾಡಬಾರದು. ತ್ವರಿತವಾಗಿ ಸಮಾನ ಕೂಲಿ ಹೆಚ್ಚಳ ಮಾಡದಿದ್ದರೆ ನ.3ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕರಿನಾಯಕ, ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ವಿಕ್ರಮ್, ಎಚ್.ನಾಗರಾಜು, ರಾಜಪ್ಪ ಇದ್ದರು.
