ಪಬ್ಲಿಕ್ ಅಲರ್ಟ್ ನ್ಯೂಸ್:-ಹಬ್ಬ ಹರಿದಿನಗಳಂತೆ ಪರೀಕ್ಷೆಗೂ ಕಾಳಜಿವಹಿಸಿ – ಸಿಇಓ
ಹಬ್ಬ, ಜಾತ್ರೆಗಳಂತೆಯೇ ಪರೀಕ್ಷೆಗಳಿಗೂ ಹೆಚ್ಚಿನ ಕಾಳಜಿವಹಿಸೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ನಡೆದ SSLC ಯ ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಣಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಸ್ಥಳೀಯ ರಜೆಗಳನ್ನು ನೀಡದೇ, ಉಳಿದಿರುವ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ಧಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮೊದಲ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 40% ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳು, ಪ್ರಸ್ತುತ ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆಯನ್ನು ಕಂಡಿದ್ದು ಅಂತಹ ಶಾಲೆಗಳ ಮೇಲೆ ತಾಲೂಕು ಮಟ್ಟದ ಅಧಿಕಾರಿಗಳು ವೈಯಕ್ತಿಕ ನಿಗಾ ವಹಿಸುವಂತೆ ಸೂಚನೆ ನೀಡಿದರು. ಜೊತೆಗೆ ಅತಿ ಹೆಚ್ಚು ಮಕ್ಕಳು ನೋಂದಣಿಯಾಗಿರುವ ಶಾಲೆಗಳನ್ನು ನಿರಂತರ ಬೇಟಿಗಳ ಮೂಲಕ ಅವಲೋಕಿಸುವಂತೆ ತಿಳಿಸಿದ ಅವರು, ಮೊದಲ ಮೂರು ಸ್ಥಾನದೊಳಗೆ ಮೈಸೂರು ಜಿಲ್ಲೆಯ SSLC ಫಲಿತಾಂಶ ಇರುವಂತೆ ಎಲ್ಲರೂ ಪರಿಶ್ರಮಿಸಬೇಕೆಂದು ಕರೆಕೊಟ್ಟರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ.ಉದಯ್ ಕುಮಾರ್ , ಡಯಟ್ ಪ್ರಾಂಶುಪಾಲರಾದ ಶ್ರೀ ನಾಗರಾಜಯ್ಯ ಸೇರಿದಂತೆ ಜಿಲ್ಲಾ ಎಲ್ಲಾ ಒಂಬತ್ತು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಿಎಮ್ಪೋಷಣ್ ಕಾರ್ಯಕ್ರಮದ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿ ಅಧಿಕಾರಿ ವರ್ಗದವರು ಹಾಜರಿದ್ದರು.
