ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ: ನ್ಯಾಯಮೂರ್ತಿ ಎಸ್. ಜಿ. ಪಂಡಿತ್

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ: ನ್ಯಾಯಮೂರ್ತಿ ಎಸ್. ಜಿ. ಪಂಡಿತ್

ಮೈಸೂರು, ಜುಲೈ 04( ಕರ್ನಾಟಕ ವಾರ್ತೆ )ಇಂದಿನ ದಿನಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ಗಿಡ ನೆಡುವ ಕೆಲಸಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯನ್ನೂ ತಲುಪಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ್ ಅವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ ಸಂಘ, heart fullness institute, mysuru ಹಾಗೂ ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ತೋಟಗಾರಿಕಾ ಮಹಾವಿದ್ಯಾಲಯ, ಯಲಚನಹಳ್ಳಿ, ಇಲವಾಲ ಇಲ್ಲಿ ಚಾಲನೆ (ಒಂದು ಮರ ನೂರಾರು ಉಸಿರು) ನೀಡಿ ಮಾತನಾಡಿದರು.

ಇಂದಿನ ಮಾನವ ಕುಲವು ತನ್ನ ಮೂಲಭೂತ ಕರ್ತವ್ಯಗಳನ್ನೇ ಮರೆತುಬಿಟ್ಟಿದೆ. ಪ್ರತಿಯೊಂದನ್ನೂ ನೆನಪಿಸಲು ನಮಗೊಂದು ದಿನಾಚರಣೆಯ ಅಗತ್ಯ ಬೀಳುತ್ತಿದೆ. ಆಚರಣೆಯ ದಿನ ಮಾತ್ರ ಪರಿಸರ ನೆನಪಿರುತ್ತದೆ, ಆದರೆ ಮರುದಿನವೇ ನಾವು ಅದನ್ನು ಮರೆತುಬಿಡುತ್ತೇವೆ. ದಿನನಿತ್ಯವೂ ಕಾಡುತ್ತಿರುವ ಪರಿಸರ ಅಸಮತೋಲನ ಮತ್ತು ತೀವ್ರ ಉಷ್ಣ ಅಲೆಗಳಿಗೆ ಮಾನವನ ಸ್ವಾರ್ಥವೇ ಕಾರಣ. ಮಾನವನು ತನ್ನ ವೈಯಕ್ತಿಕ ಲಾಭಕ್ಕಾಗಿ ಮರಗಳನ್ನು ಕಡಿಯುತ್ತಿರುವುದರ ದುಷ್ಪರಿಣಾಮವನ್ನು ನಾವೀಗ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ ಎಂದರು.

ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅಷ್ಟೇ ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 51 ರ ಅಡಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಅರಣ್ಯವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದೇವಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಇಂದು ನಾವೆಲ್ಲರೂ ಸೇರಿ ಉತ್ಸಾಹದಿಂದ ಗಿಡಗಳನ್ನು ನೆಟ್ಟು ಮನೆಗೆ ಮರಳುತ್ತೇವೆ. ಆದರೆ ಆ ಸಸಿಗಳನ್ನು ಮುಂದೆ ಹೇಗೆ ಪೋಷಿಸುತ್ತೇವೆ ಎಂಬುದು ಅತ್ಯಂತ ಮುಖ್ಯ. ನಮ್ಮ ಮಕ್ಕಳನ್ನು 10-20 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸುವ ನಾವು, ಕನಿಷ್ಠ ಒಂದು ವರ್ಷವಾದರೂ ನೆಟ್ಟ ಗಿಡವನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಹೇಳಿದರು.

ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್ ನೆಟ್ಟ ಸಸಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿರುವುದನ್ನು ಶ್ಲಾಘಿಸಿದ ನ್ಯಾಯಮೂರ್ತಿಗಳು, ಪ್ರತಿ ವರ್ಷ ಒಂದು ಲಕ್ಷ ಸಸಿಗಳನ್ನು ನೆಟ್ಟು, ಅವುಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸಿದರೆ, ಅದು ಪರಿಸರಕ್ಕೆ ನಾವು ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ವಿಷ್ಣುವರ್ಧನ ಅವರು ಮಾತನಾಡಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇಂದು ಪ್ರಕೃತಿಯ ಸಮತೋಲನ ತಪ್ಪುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ವಲಯಗಳು ಭೀತಿ ಎದುರಿಸುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇಂದು ಪರಿಸರ ಸಮತೋಲನ ತಪ್ಪುತ್ತಿದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ಇರಬೇಕಾದ ಮಿತಿಗಿಂತ ಅಧಿಕ ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಹಾಗೂ ಬಿಸಿಲಿನ ಬೇಗೆಯಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇದು ನೇರವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕಾ ಬೆಳೆಗಳ ಜೈವಿಕ ಕ್ರಿಯೆಯಲ್ಲಿ ಏರುಪೇರಾಗುತ್ತಿದೆ. ಸಿ.ಪಿ.ಸಿ.ಆರ್.ಐ ವರದಿ ಪ್ರಕಾರ, ಕೇವಲ 1 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಏರಿಕೆಯಿಂದಾಗಿ ತೆಂಗು ಇಳುವರಿಯಲ್ಲಿ ಶೇ. 20 ರಷ್ಟು ಕುಸಿತ ಕಂಡುಬಂದಿದೆ. ಇನ್ನು ಮಾವಿನ ಬೆಳೆಯಲ್ಲೂ ಸಹ ಡಿಸೆಂಬರರ್ ಜನವರಿಯಲ್ಲಿ ಬರಬೇಕಾದ ಹೂವು, ಈಗ ಜೂನ್-ಜುಲೈ ತಿಂಗಳಲ್ಲೂ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ರೈತರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದರು.

ನಾವು ಕೇವಲ ಗಿಡ ನೆಡುವುದಷ್ಟೇ ಅಲ್ಲ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಿದೆ. ಇಂದು ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ತಿನ್ನುವ ಆಹಾರವನ್ನು ವಿಷವಾಗಿಸಿಕೊಂಡಿದ್ದೇವೆ. ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಜೀವಿಗಳು ನಾಶವಾಗಿ, ಭೂಮಿ ಬಂಜರಾಗುತ್ತಿದೆ. ನೀರನ್ನು ಮರುಬಳಕೆ ಮಾಡುವುದು ಮತ್ತು ಜಾಗರೂಕತೆಯಿಂದ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ದೇಶದಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಆದರೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. 1950ರಲ್ಲಿ ನಮ್ಮ ದೇಶದ ಜನಸಂಖ್ಯೆ 40 ಕೋಟಿಯಿದ್ದಾಗ ಆಹಾರ ಉತ್ಪಾದನೆ 50 ಮಿಲಿಯನ್ ಟನ್ ಇತ್ತು. ಇಂದು ಜನಸಂಖ್ಯೆ 150 ಕೋಟಿ ತಲುಪಿದ್ದರೂ, ನಮ್ಮ ಆಹಾರ ಉತ್ಪಾದನೆ 350 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಪರಿಸರ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರರಾದ ಉಷಾರಾಣಿ, , ಡಿ.ಸಿ.ಎಫ್. ಪರಮೇಶ ಕೆ., ವಕೀಲರ ಸಂಘದ ಅಧ್ಯಕ್ಷರಾದ ಎಸ್. ಲೋಕೇಶ್, Regional Felicitator, Heartfulness Institute ನ ಕೆ. ಮಧುಸೂಧನ್, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಚಂದ್ರಶೇಖರ್ ಹಂಚಿನಮನಿ ಅವರು ಉಪಸ್ಥಿತರಿದ್ದರು.

Share This Article
Leave a Comment