ಅಟಲ್ ಪಿಂಚಣಿ ಯೋಜನೆ ಕಾರ್ಯಾಗಾರ ಯಶಸ್ವಿ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಅಟಲ್ ಪಿಂಚಣಿ ಯೋಜನೆ ಕಾರ್ಯಾಗಾರ ಯಶಸ್ವಿ

ಮೈಸೂರು, ಜು.9: ಅಟಲ್ ಪಿಂಚಣಿ ಯೋಜನೆ(ಎಪಿವೈ) ಪ್ರಚಾರ ಮತ್ತು ರಾಜ್ಯಮಟ್ಟದ ಕಾರ್ಯತಂತ್ರ ಪರಿಶೀಲನಾ ಸಭೆ ಯಶಸ್ವಿಯಾಗಿ ಸಂಪನ್ನವಾಯಿತು.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್ಆರ್ಡಿಎ), ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಮತ್ತು ಲೀಡ್ ಬ್ಯಾಂಕ್(ಭಾರತೀಯ ಸ್ಟೇಟ್ ಬ್ಯಾಂಕ್) ಸಂಯುಕ್ತಾಶ್ರಯದಲ್ಲಿ ಖಾಸಗಿ ಹೋಟೆಲ್ನಲ್ಲಿ ಅಟಲ್ ಪೆನ್ಶನ್ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ವಿವಿಧ ಬ್ಯಾಂಕ್ಗಳ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಕಾರ್ಯಕ್ಷಮತೆ ಕುರಿತು ಸುದೀರ್ಘ ಸಂವಾದ ಮತ್ತು ಪ್ರಗತಿ ಪರಿಶೀಲನೆ ನಡೆಯಿತು.
ಕರ್ನಾಟಕ ರಾಜ್ಯ ಬ್ಯಾಂಕರ್ ಸಮಿತಿ ಸಂಚಾಲಕರೂ ಆದ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶ್ರೀನಾಥ್ ಜೋಶಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಪಿಎಫ್ಆರ್ಡಿಎ ಮುಖ್ಯ ಮಹಾಪ್ರಬಂಧಕ ಪ್ರವೇಶ್ ಕುಮಾರ್ ಅವರು ಯೋಜನೆಯ ಮಹತ್ವ ಹಾಗೂ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಇದೇ ವೇಳೆ ಯೋಜನೆ ಅನುಷ್ಠಾನದಲ್ಲಿ ಕಳೆದ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕ್ಗಳು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶಾಂತವೀರ್, ಪಿಎಫ್ಆರ್ಡಿಎ ಸಹಾಯಕ ವ್ಯವಸ್ಥಾಪಕ ಅಜಯ್ ಕುಮಾರ್ ಪೋಡಿಶೆಟ್ಟಿ ಉಪಸ್ಥಿತರಿದ್ದರು.
ರಾಜಶ್ರೀ ಜೋಶಿ ಪ್ರಾರ್ಥಿಸಿದರೆ, ಕರ್ನಾಟಕ ರಾಜ್ಯ ಬಾಂಕರ್ ಕಮಿಟಿ ಮುಖ್ಯ ವ್ಯವಸ್ಥಾಪಕ ಆನಂದ ನಾಯಕ್ ಸ್ವಾಗತಿಸಿದರು. ಮೈಸೂರು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಪಿ.ಕೃಷ್ಣಮೂರ್ತಿ ವಂದಿಸಿದರು. ಡಾ.ಶುಭಶ್ರೀ ಪ್ರಸಾದ್ ನಿರೂಪಿಸಿದರು.

Share This Article
Leave a Comment