ಪಬ್ಲಿಕ್ ಅಲರ್ಟ್
ಮೈಸೂರು: ನಮ್ಮ ಪರಂಪರೆ ಮತ್ತು ಪಾರಂಪರಿಕ ಕಟ್ಟಡಗಳನ್ನು ಕಾಪಾಡುವ ಹಕ್ಕು ನಮ್ಮದಾಗಿದ್ದು, ಹಕ್ಕುಗಳ ಜೊತೆಯಲ್ಲಿ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಸೆಲ್ವಪಿಳ್ಳೆ ಅಯ್ಯಂಗಾರ್ ಹೇಳಿದರು.
ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ರಂಗಾಚಾರ್ಲು ಪುರಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆಯ ಅತಿಥಿಯಾಗಿ ಮಾತನಾಡಿದರು. ಪುರಭವನಕ್ಕೆ ನಿಯೋ ಕ್ಲಾಸಿಕಲ್ ಸ್ಟೈಲ್ ಎಂಬ ಮತ್ತೊಂದು ಹೆಸರಿದ್ದು, 1884ರಲ್ಲಿ ರಂಗಚಾರ್ಲು ಅವರು ದಿವಾನರಾಗಿದ್ದ ಸಂದರ್ಭದಲ್ಲಿ ಕಟ್ಟಿಸಲಾಗಿರುತ್ತದೆ. ಹಾಗಾಗಿಯೇ ಈ ಕಟ್ಟಡ ವಿಶೇಷತೆಯಿಂದ ಕೂಡಿದ್ದು, ಸಿಮೆಂಟ್ ಬಳಸದೇ ಕಟ್ಟಿಸಲಾಗಿರುತ್ತದೆ. ರಂಗಚಾರ್ಲು ಅವರು ಬ್ರಿಟಿಷ್ ಅವರ ಸರ್ಕಾರದಲ್ಲಿ ಆಗುತ್ತಿದ್ದ ಭ್ರಷ್ಟಚಾರ ಕಂಡು ಹಿಡಿದು ಅದರ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದರು. ಆ ಸಂದರ್ಭದಲ್ಲಿ ಇವರನ್ನು ಮೈಸೂರಿನ ದಿವಾನರಾಗಿ ಮಾಡಿದ್ದರು. ಸಾಮಾನ್ಯವಾಗಿ ನಾವೆಲ್ಲರೂ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಪಾಲಿಸುವುದಿಲ್ಲ. ಹಾಗಾಗಿ ಮೊದಲಿಗೆ ಅಂತೆಯೇ ನಮ್ಮಲ್ಲಿರುವ ಎಲ್ಲಾ ಕಟ್ಟಡಗಳು 1880 ರಿಂದೀಚೆಗೆ ಕಟ್ಟಿಸಲಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸುವ ಮೂಲಕ ಇತಿಹಾಸದ ಕುರಿತು ವಿವರಿಸಿದರು.



ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾರಂಪರಿಕ ಕಟ್ಟಡಗಳು, ದೇಗುಲಗಳು, ಮಸೀದಿಗಳು ಎಲ್ಲವೂ ಸಹ ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇಂದಿಗೂ ಅವುಗಳು ಇತಿಹಾಸದ ಗುರುತನ್ನು ಸಾರುತ್ತವೆ. ಆದ್ದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಎಂದು ಹೇಳಿದರು.
ನಡಿಗೆ ಸಾಗಿದ ಹಾದಿ: ಪಾರಂಪರಿಕ ನಡಿಗೆಯು ಪುರಭವನದಿಂದ ಸಾಗಿ, ದೊಡ್ಡ ಗಡಿಯಾರ, ಹತ್ತನೇ ಚಾಮರಾಜ ಒಡೆಯರ್ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ ರಸ್ತೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಹಾದು, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಮುಖೇನಾ ಕಾವೇರಿ ಎಂಪೋರಿಯಂ ಮತ್ತು ಗಾಂಧಿ ವೃತ್ತದಿಂದ ಮರಳಿ ಪುರಭವನಕ್ಕೆ ಸಾಗಿತು.
ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಮಾನಸ ಗಂಗೋತ್ರಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಡಾ.ಎನ್.ಎಸ್.ರಂಗರಾಜು, ಉಪ ನಿರ್ದೇಶಕಿ ಡಾ.ಸಿ.ಎನ್. ಮಂಜುಳಾ, ತಾರಕೇಶ್, ಅಂಬರೀಶ್ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.
