ಪಬ್ಲಿಕ್ ಅಲರ್ಟ್
ಮೈಸೂರು: ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಒಕ್ಕೂಟದಿಂದ ಸೆ.೧೮ರಂದು ಬೆಳಿಗ್ಗೆ ೧೦ಕ್ಕೆ ಇಲ್ಲಿನ ಉದ್ಬೂರು ಗೇಟ್ ಬಳಿಯ ವಿಷ್ಣುವರ್ಧನ್ ಸ್ಮಾರಕ ಆವರಣದಲ್ಲಿ ವಿಷ್ಣುವರ್ಧನ್ ಜನ್ಮದಿನಾಚರಣೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಎಂ.ಡಿ.ಪಾರ್ಥಸಾರಥಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಕರ್ನಾಟಕ ರತ್ನ ಪ್ರಶಸ್ತಿ ದೊರೆತಿರುವುದಕ್ಕೆ ಸಂಭ್ರಮಾಚರಣೆ ನಡೆಯಲಿದೆ. ಬೆಳಿಗ್ಗೆ ೧೦ಕ್ಕೆ ಭಾರತಿ ವಿಷ್ಣುವರ್ಧನ್ ಕುಟುಂಬದವರು ಪೂಜೆ ನೆರವೇರಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ಮುಖಂಡ ಎಂ.ಕೆ.ಸೋಮಶೇಖರ್ ಪಾಲ್ಗೊಳ್ಳುವರು. ಬೆಳಿಗ್ಗೆ ೧೧ರಿಂದ ವಿಷ್ಣು ಗ್ರೂಪ್ ತಂಡವು ವಿಷ್ಣುವರ್ಧನ್ ನಟನೆಯ ಚಿತ್ರಗಳ ಗೀತ ಗಾಯನ ನಡೆಸುವರು. ಸುಮಾರು ೫,೦೦೦ ಜನಕ್ಕೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಒಕ್ಕೂಟದ ಗೌರವಾಧ್ಯಕ್ಷ ಟಿ.ವಿ. ಸುರೇಶ್, ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಸಂತೋಷ್, ಖಜಾಂಚಿ ಎಸ್.ಆರ್. ರಾಜು, ಉಮೇಶ್, ಮಹದೇವ್ ಇದ್ದರು.
