ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಪ್ಲಾನೆಟೋರಿಯಂಗೆ ನಿರ್ಮಲಾ ಸೀತಾರಾಮನ್ 5 ಕೋಟಿ ಅನುದಾನ
ಸಂಸದರ ನಿಧಿಯಿಂದ ಹಣ ನೀಡಿದ ಸಚಿವರಿಗೆ ಧನ್ಯವಾದ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು, ಜ. 12: ಯುವ ಸಮುದಾಯಕ್ಕೆ, ವಿದ್ಯಾರ್ಥಿಗಳ ಶೈಕ್ಷಣಿಕ, ವೈಜ್ಞಾನಿಕ ಉತ್ತೇಜನಕ್ಕಾಗಿ ಮೈಸೂರಿನಲ್ಲಿ ಪ್ಲಾನೆಟೋರಿಯಂ ನಿರ್ಮಾಣಕ್ಕೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಐದು ಕೋಟಿ ರೂ. ಅನುದಾನವನ್ನು ಸಂಸದರ ನಿಧಿಯಿಂದ ಬಿಡುಗಡೆ ಮಾಡಿರುವುದು ಶ್ಲಾಘನೀಯ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಮೈಸೂರಿನಲ್ಲಿ ಕಾಸ್ಮೋಲಜಿ ಎಜುಕೇಷನ್ ಅಂಡ್ ರೀಸರ್ಚ್ ಟ್ರೇನಿಂಗ್ ಸೆಂಟರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾಸ್ಮೋಸ್ ಪ್ಲಾನೆಟೇರಿಯಮ್ ಯೋಜನೆಯು ನಮ್ಮ ಯುವಜನರಿಗೆ ಕುತೂಹಲ, ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಒತ್ತು ನೀಡುತ್ತದೆ ಎಂದು ವಿವರಿಸಿದ್ದಾರೆ.
ಈ ಪ್ರಮುಖ ಯೋಜನೆಯು ಮೈಸೂರಿನ ಪ್ರವಾಸಿ ತಾಣದ ಹೆಗ್ಗುರುತಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಸ್ಥಳೀಯ ಅಭಿವೃದ್ಧಿಗೆ ಹೊಸ ಮಾರ್ಗ ಅವಕಾಶ ಒದಗಿಸುತ್ತದೆ ಜೊತೆಗೆ. ಜ್ಞಾನದ ಕೇಂದ್ರವಾಗಿ ಮೈಸೂರಿನ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿವರಿಸಿದ್ದಾರೆ.
ವಿಶ್ವದ ಮೊದಲ ಓರೆಯಾದ ಗುಮ್ಮಟ ತಾರಾಲಯ
ಮೈಸೂರು ವಿವಿಯ ಚಾಮುಂಡಿ ಬೆಟ್ಟದ ಕ್ಯಾಂಪಸ್ನಲ್ಲಿ ತಾರಾಲಯ ನಿರ್ಮಿಸಲಾಗುತ್ತಿದ್ದು, ಇದು ವಿಶ್ವದ ಮೊದಲ ಓರೆಯಾದ ಗುಮ್ಮಟಾಕೃತ್ತಿಯ ಎಲ್ಇಡಿ ತಾರಾಲಯವಾಗಲಿದೆ ಎಂದು ಸಂಸದರು ಹೇಳಿದ್ದಾರೆ.
ಈ ಯೋಜನೆ ಪೂರ್ಣಗೊಂಡ ನಂತರ ಮೈಸೂರಿನ ಪ್ರಮುಖ ಪ್ರವಾಸಿ ಹಾಗೂ ಜ್ಞಾನ ಕೇಂದ್ರವಾಗಿ ಇದು ಹೊರಹೊಮ್ಮಲಿದೆ ಎಂದಿದ್ದಾರೆ.
ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಕೊಡುಗೆ ನೀಡುವ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವ ನಿರ್ಮಲಾ ಸೀತಾರಾಮನ್ ಅವರ ಬದ್ಧತೆಗೆ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
