ಪಬ್ಲಿಕ್ ಅಲರ್ಟ್
ಮೈಸೂರು: ಶತಮಾನದ ಇತಿಹಾಸವುಳ್ಳ ರಾಜ್ಯ ಮಟ್ಟಕ್ಕೆ ಸೀಮಿತವಾಗಿರುವ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯ ಚಟುಚಟಿಕೆಯನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ.ಮಂಜೇಗೌಡ ಹೇಳಿದರು.
ನಗರದ ಜೆ.ಕೆ.ಮೈದಾನದಲ್ಲಿ ಅಮೃತ ಮಹೋತ್ಸವ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನ 105ನೇ ವರ್ಷದ ಶತ ಪಯಣದ ಸಮಾರಂಭದಲ್ಲಿ ಮಾತನಾಡಿದರು. ‘‘1920ರಲ್ಲಿ ಆರಂಭಗೊಂಡ ಬ್ಯಾಂಕಿಗೆ ಶತಮಾನದ ಇತಿಹಾಸವಿದ್ದು, ಬ್ಯಾಂಕಿನ ಸದಸ್ಯರೇ ಆಧಾರ ಸ್ತಂಭ. ಮೈಸೂರು ಸೇರಿದಂತೆ ರಾಜ್ಯ ವ್ಯಾಪ್ತಿ ರೈಲ್ವೆ ನೌಕರರಿಗೆ ಸೇವಾ ಸೌಲಭ್ಯವನ್ನು ಕಲ್ಪಿಸುವ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ ಕಾರ್ಯ ಚಟುವಟಿಕೆಯನ್ನು ಮುಂದಿನ ದಿನಗಳಲ್ಲಿ ರಾಷ್ಟ್ರ ವ್ಯಾಪ್ತಿ ವಿಸ್ತರಣೆ ಮಾಡಿ ನೆರೆ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.
‘‘ಸದ್ಯ ಬ್ಯಾಂಕಿನ ವಾರ್ಷಿಕ ವಾಹಿವಾಟು 1,250 ಕೋಟಿ ರೂ. ಇದ್ದು, ಅದನ್ನು 2 ಸಾವಿರ ಕೋಟಿ ರೂ.ವರೆಗೆ ವಿಸ್ತರಣೆ ಮಾಡಲಾಗುವುದು. ಜತೆಗೆ 510 ಕೋಟಿ ರೂ. ಠೇವಣಿ ಇದ್ದುಘಿ, ಅದನ್ನು ಸಾವಿರ ಕೋಟಿ ರೂ.ಗೆ ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಬ್ಯಾಂಕಿನಿಂದ ಹೊಸದಾಗಿ ಯುಪಿಐ ಸೇವೆ ಆರಂಭಿಸುವುದರೊಂದಿಗೆ 25 ಲಕ್ಷ ರೂ. ವರೆಗೆ ಶೈಕ್ಷಣಿಕ ಸಾಲ, ಗೃಹ ಸಾಲವನ್ನು 75 ಲಕ್ಷ ರೂ.ವರೆಗೆ, ವೈಯಕ್ತಿಕ ಸಾಲವನ್ನು 25ರಿಂದ 40 ಲಕ್ಷ ರೂ.ವರೆಗೆ ವಿಸ್ತರಿಸಲಾಗುವುದು. ಚಿನ್ನಾಭರಣ ಅಡಮಾನ ಸಾಲವನ್ನು ಸಹ ಆರಂಭಿಸಲಾಗುವುದು,’’ ಎಂದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘‘ಹೆಚ್ಚಿನ ನೌಕರರನ್ನು ಹೊಂದಿರುವ ರೈಲ್ವೆ ಇಲಾಖೆಯು ಸಾಕಷ್ಟು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ. ರೈಲ್ವೆ ಇಲಾಖೆಯಲ್ಲಿ ಸಂಬಳ ತೆಗೆದುಕೊಳ್ಳುತ್ತಿದ್ದವರು ಸಾಲಕ್ಕಾಗಿ ಖಾಸಗಿ ಲೇವಾದೇವಿಗಾರರ ಬಳಿ ಹೋಗುತ್ತಿದ್ದರು. ಇದನ್ನು ಮನಗಂಡ ನೌಕರರು ತಮ್ಮದೇ ಆದ ಕೋ ಆಪರೇಟಿವ್ ಬ್ಯಾಂಕನ್ನು 1920ರಲ್ಲಿ ಪ್ರಾರಂಭ ಮಾಡಿದರು,’’ ಎಂದು ಹೇಳಿದರು.
ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ‘‘105 ವರ್ಷಗಳಿಂದ ಬ್ಯಾಂಕ್ ನಡೆದುಕೊಂಡು ಬಂದಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಪ್ರಾಮಾಣಿಕತೆ, ನಿಷ್ಠೆ ಇರುವುದಕ್ಕೆ ಮಾತ್ರ ಇಲ್ಲಿಯವರೆಗೂ ಈ ಬ್ಯಾಂಕ್ ಉಳಿದುಕೊಂಡು ಬಂದಿದೆ. ರೈಲ್ವೆ ಇಲಾಖೆಯು ವರ್ಣ, ವರ್ಗ, ಧರ್ಮ ಎಲ್ಲವನ್ನೂ ಮಿರಿ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುತ್ತಾ ಬಂದಿದೆ’’ ಎಂದರು.
ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಠೇವಣಿ ಇಟ್ಟಿರುವ ಹಿರಿಯ ಸದಸ್ಯರನ್ನು ಸತ್ಕರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ಆರ್.ನಗರ ಕಾಗಿನೆಲೆ ಮಠದ ಡಾ.ಶಿವಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಟಿ.ಎಸ್.ಶ್ರೀವತ್ಸ, ಸೌತ್ ವೆಸ್ಟರ್ನ್ ರೈಲ್ವೆ ಮೈಸೂರು ಕಾರ್ಯಾಗಾರದ ಚ್ೀ ವರ್ಕ್ಸ್ ಮ್ಯಾನೇಜರ್ ವಿ.ಕೆ.ಚಡ್ಡಾ, ಹುಬ್ಬಳ್ಳಿ ಕಾರ್ಯಾಗಾರದ ವಿಜಯ ಸಿಂಗ್ ಯಾದವ್, ರೈಲ್ವೆಯ ವಿಭಾಗೀಯ ರೈಲ್ವೆ ಮ್ಯಾನೇಜರ್ಗಳಾದ ಬೇಲಾ ಮೀನಾ, ಮುದಿತ್ ಮಿತ್ತಲ್, ಅಶುತೋಷ್ ಕುಮಾರ್ ಸಿಂಗ್, ಡಾ.ಎಸ್.ಪಿ.ಯೋಗಣ್ಣ, ಉಪಾಧ್ಯಕ್ಷ ಡಾ.ಎಸ್.ಆನಂದ, ನಿರ್ದೇಶಕರಾದ ಹನುಮಂತ, ಎಂ.ಬಿ.ಯೋಗನಂದ, ಎಸ್.ಮುತ್ತಕುಮಾರ್, ಆರ್.ಚಂದ್ರಶೇಖರ್, ಎಂ.ಯತಿರಾಜು, ಸಿ.ರಾಮನಾದನ್, ಸಿ.ಎಚ್.ಮಂಜುನಾಥ್, ಸಿ.ಶಿವಶಂಕರ್, ಎಸ್.ಉತ್ತೇಜ್, ಸಿ.ನಿರ್ಮಲ, ಏಸ್.ಶ್ವೇತಾ, ಎನ್.ಎಸ್.ನಂದಕುಮಾರ್, ಪಿ.ಚಂದ್ರಶೇಖರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ನಾರಾಯಣ, ಜನರಲ್ ಮ್ಯಾನೇಜರ್ ಗಳಾದ ಎಂ.ಸಿ.ಲಕ್ಷ್ಮಿಪ್ರಸಾದ್, ಹೆಚ್.ಸಿ.ಸತ್ಯನಾರಾಯಣ ಇದ್ದರು. ಬ್ಯಾಂಕಿನ ಸದಸ್ಯರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
