ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಯೋಗ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ೫೦ನೇ ಸುವರ್ಣ ಸಂಭ್ರಮ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಘ, ಗ್ಲೋಬಲ್ ಯೋಗ ಫೋರಮ್, ಮೈಸೂರು ಜಿಲ್ಲಾ ಯೋಗ ಕ್ರೀಡಾ ಫೌಂಡೇಷನ್ ಹಾಗೂ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಇಂದಿನಿಂದ ಆರಂಭವಾದ ಸೀನಿಯರ್ ನ್ಯಾಷನಲ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ಶಿಪ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸಣ್ಣ ಸಣ್ಣ ವಿಚಾರಗಳಿಗೂ ಇಂದು ಎಲ್ಲರೂ ಒತ್ತಡಕ್ಕೆ ಒಳಗಾಗುತಿದ್ದಾರೆ. ಈ ರೀತಿಯ ಸಮಸ್ಯೆಗಳಿಗೆ ಯೋಗ ಸಹಕಾರಿಯಾಗಿದ್ದು, ಎಲ್ಲವನ್ನು ನಿಯಂತ್ರಿಸಲು ಸಾಥ್ ನೀಡುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಕೋಪಗೊಳ್ಳುವುದರಿಂದ ಉತ್ತಮವಾದ ಉಸಿರಾಟದ ಕ್ರಿಯೆಯನ್ನು ಕಳೆದುಕೊಳ್ಳುತೇವೆ. ಎಲ್ಲಾ ವಿಚಾರಗಳಿಗೂ ಕೋಪ ಮಾಡಿಕೊಳ್ಳುವ, ಉದ್ವೇಗಕ್ಕೊಳಗಾಗುವುದನ್ನು ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಾಂಸಾರಿಕ ಜೀವನದಲ್ಲಿ ಸ್ವಾಸ್ಥ್ಯ ಜೀವನ ನಡೆಸಲು ಯೋಗ ಸಹಕಾರಿಯಾಗಿದೆ. ಕಾಲಾಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಬೇಕು. ಉತ್ತಮ ಜೀವನಕ್ಕೆ ಏಕಾಗ್ರತೆ ಬಹಳ ಮುಖ್ಯವಾಗಿದ್ದು, ಯೋಗದ ಮೊರೆ ಹೋಗಬೇಕು. ಆತ್ಮ ಅರ್ಪಣೆ ಮಾಡಿಕೊಳ್ಳಬೇಕು. ಅದಕ್ಕೂ ಮೊದಲು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು.
ಭಾರತದಲ್ಲಿ ಮೊದಲು ೧೯೭೬ರಲ್ಲಿ ನಾನು ಯೋಗ ಪರಿಚಯಿಸಲು ಮುಂದಾದಾಗ ಇಲ್ಲಿನ ಜನರು ಅಪಹಾಸ್ಯ ಮಾಡಿದರೂ, ಆದರೆ, ಅಮೇರಿಕ, ಆಸ್ಟ್ರೇಲಿಯಾ, ವೆಸ್ಟ್ ಇಂಡಿಸ್ ಸೇರಿದಂತೆ ನಾನಾ ದೇಶಗಳಲ್ಲಿ ಯೋಗವನ್ನು ಕಲಿತುಕೊಂಡರು. ಈಗ ಎಲ್ಲರೂ ಯೋಗ ಯೋಗ ಎಂದು ಜಪ ಮಾಡುತ್ತಿದ್ದಾರೆ. ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಯೋಗಕ್ಕೆ ಪ್ರಾಧಿನಿದ್ಯ ನೀಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.


ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತದ ಸಂಪೂರ್ಣ ಆರ್ಥಿಕ ಅಭಿವೃದ್ಧಿ ರಾಷ್ಟ್ರವಾಗಿಸಲು ಮುನ್ನಡೆಯುತ್ತಿದ್ದು, ಅಂತಹ ಅಭಿವೃದ್ಧಿಗೆ ತಳಹದಿಯಾಗಿ ಭಾರತೀಯ ಸಂಸ್ಕೃತಿ ಮತ್ತು ಮನೋಶಕ್ತಿಯಿದೆ. ಅದಕ್ಕೆ ಯೋಗವೇ ಪ್ರಮುಖ ಕಾರಣವಾಗಿದ್ದು, ಬೇರೇನೂ ಅಲ್ಲ ಎಂದರು.
ಆಧುನಿಕ ಯೋಗ ಜಾಗತಿಕ ಹರಡುವಿಕೆಯ ಮೇಲೆ ಪ್ರಭಾವ ಬೀರಿದ್ದು, ಅದರ ಅಭ್ಯಾಸದಿಂದ ಕ್ರಿಯಾತ್ಮಕವಾಗಿ ವಿಕಸನಗೊಂಡಿದೆ. ಭಾರತೀಯರು ತಮ್ಮ ಜೀವನವನ್ನು ನಡೆಸುವ ವಿಧಾನ ಮತ್ತು ಆಧ್ಯಾತ್ಮಿಕತೆಯು ಯೋಗಾಭ್ಯಾಸದಿಂದ, ಯೋಗದ ತಾತ್ವಿಕ ಆಧಾರದಿಂದ ಬಂದಿದೆ. ಈ ಅಂಶವನ್ನು ನಾವು ಆ ತಿಳುವಳಿಕೆಯೊಂದಿಗೆ ಮುಂದುವರೆಸಬೇಕಿದೆ ಎಂದು ತಿಳಿಸಿದರು.
ಆಧುನಿಕ ಯೋಗ ಹುಟ್ಟಿದ್ದು ಮೈಸೂರಿನಲ್ಲಿ. ಅದರ ಭಾಗವಾಗಿ ಆಧುನಿಕ ಯೋಗ ಪಿತಾಮಹಾ ಟಿ.ಕೃಷ್ಣಮಾಚಾರ್ಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಸಮುಂದಲ್ಲಿ ಸ್ಥಾಪಕ ಕುಲಪತಿಯಾಗಿದ್ದರು. ಬಳಿಕ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜು ಯೋಗಾಭ್ಯಾಸ ತರಬೇತಿ ಆರಂಭಿಸಿದ ಟಿ.ಕೃಷ್ಣಮಾಚಾರ್ಯರು ಬಿ.ಕೆ.ಎಸ್.ಐಯಂಗಾರ್ ಮತ್ತು ಪಟ್ಟಾಭಿ ಜೋಯಿಸ್ ಅವರಿಗೆ ಯೋಗ ತರಬೇತಿ ನೀಡಿ ಯೋಗದಲ್ಲಿ ಮೈಸೂರನ್ನು ಅಂತರರಾಷ್ಟೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದರು.
ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಯೋಗ ಅಭ್ಯಾಸದಿಂದ ಏಕಾಗ್ರತೆ ಹಾಗೂ ಮನಸ್ಸಿನ ಶಾಂತಿ ಹೆಚ್ಚು ವೃದ್ಧಿಸುತ್ತದೆ. ಯೋಗ ದೈಹಿಕವಾಗಿ, ಮಾನಸಿಕವಾಗಿ, ಮನುಷ್ಯನ ಮಾನವೀಯ ಗುಣಕ್ಕೂ ಒತ್ತು ನೀಡಲಿದೆ. ಯುವಕರು ವಿದ್ಯಾರ್ಥಿ ಜೀವನದಿಂದಲೇ ಯೋಗ ಅಭ್ಯಾಸ ಮಾಡುವ ಕಡೆಗೆ ಒತ್ತು ನೀಡಬೇಕು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸಿ ಕಡ್ಡಾಯ ಶಿಕ್ಷಣವನ್ನಾಗಿಸಲು ಕಾರ್ಯಚಟುವಟಿಕೆಗಳು ನಡೆದಿದ್ದವು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದತ್ತಪೀಠಂನ ದತ್ತ ವಿಜಯಾನಂದ ಸ್ವಾಮೀಜಿ, ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಅಶೋಕ್ ಕುಮಾರ್ ಅಗರವಾಲ್, ಸಿಇಒ ಇಂದು ಅಗರ್ವಾಲ್, ಅಧ್ಯಕ್ಷ ಡಾ.ಅನಿವೃದ್ಧ್ ಗುಪ್ತಾ, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ಮೈಸೂರು ಮಂಜುನಾಥ್, ವಾಸುದೇವ್ ಭಟ್, ಶ್ರೀಹರಿ, ಡಾ ಗುರುರಾಜ್, ಕೆ.ಪ್ರಭು, ಪ್ರೊ.ಎಂ.ಜಿ ಅಮರನಾಥ್, ಡಾ.ಪಿ.ಎನ್ ಗಣೇಶ್ ಕುಮಾರ್, ಎ.ನಟರಾಜು ಉಪಸ್ಥಿತರಿದ್ದರು.