ಪಬ್ಲಿಕ್ ಅಲರ್ಟ್
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಆನೆಗಳ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದ ಸದಸ್ಯರಿಗೆ ಐಟಿ ಉದ್ಯಮಿಗಳು ಮತ್ತವರ ಗೆಳೆಯರ ಬಳಗದಿಂದ ಸೋಮವಾರ ಮದ್ಯಾಹ್ನ ಭೂರಿ ಭೋಜನ ಏರ್ಪಡಿಸಲಾಗಿತ್ತು.
ಅರಮನೆ ಆವರಣದಲ್ಲಿ ನಡೆದ ಭೋಜನ ಕೂಟದಲ್ಲಿ ಮಾವುತರು ಮತ್ತು ಕಾವಾಡಿಗರ ಕುಟುಂಬದ ಸದಸ್ಯರು ಭಾಗವಹಿಸಿ ವಿಶೇಷ ಭಕ್ಷ್ಯ ಭೋಜನಗಳನ್ನು ಸವಿದರು. ಈ ಸಂದರ್ಭದಲ್ಲಿ ಉಟೋಪಚಾರದ ಆಯೋಜಕರಾದ ಸಂತೋಷ್ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾಗಿದೆ. ಜಂಬೂಸವಾರಿಯಲ್ಲಿ ಹಲವಾರು ಆನೆಗಳು ಭಾಗವಹಿಸಿ ಕೊಟ್ಯಾಂತರ ಜನರ ಗಮನಸೆಳೆಯುತ್ತವೆ. ಆದರೆ, ಆನೆಗಳನ್ನು ಪಳಗಿಸುವುದು, ಸಾಕುವುದು, ಅವುಗಳ ಆರೋಗ್ಯ ವಿಚಾರಣೆ, ಕಾಲ ಕಾಲಕ್ಕೆ ಊಟೋಪಚಾರ ಮಾಡುವುದು ಮಾವುತರು ಮತ್ತು ಕಾವಾಡಿಗಳ ಕೆಲಸವಾಗಿದೆ. ಇದು ಕಠಿಣವಾದ ಕೆಲಸ, ಇಂತಹ ಕೆಸವನ್ನು ಹಗಲು ಇರಳು ಎನ್ನದೆ ಕಾಡಿನಲ್ಲಿ ಆನೆಗಳ ಸಂರಕ್ಷಣೆ ಮಾಡುವ ಕಾವಾಡಿಗರು ಮತ್ತು ಮಾವುತರ ಜವಾಬ್ದಾರಿ ದೊಡ್ಡದು. ಇಂತಹವರಿಗೆ ನಮ್ಮ ಕೈಲಾದ ಅಳಿಲು ಸೇವೆಯನ್ನು ಸಲ್ಲಿಸಿ ಅವರನ್ನು ತೃಪ್ತಿಪಡಿಸಿ ನಾವು ನೆಮ್ಮದಿ ಸಂತೋದ ಪಡೆಯಬೇಕೆಂಬ ಮಹದಾಸೆಯಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.
ಮತ್ತೊಬ್ಬ ಐಟಿ ಉದ್ಯಮಿ ಮಹದೇವಸ್ವಾಮಿ ಮಾತನಾಡಿದರು. ಖ್ಯಾತ ಅಡುಗೆ ಕಂಟ್ರಾಕ್ಟರ್ ಎಂಎನ್ಜೆ ಜಗದೀಶ್ ನೇತೃತ್ವದಲ್ಲಿ ತಯಾರಾದ ಅಡುಗೆ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಅರಮನೆ ಎಸಿಪಿ ಹೆಚ್.ಎಂ.ಚಂದ್ರಶೇಖರ್, ಪ್ರಸನ್ನ, ಶ್ರೀನಿವಾಸ, ದರ್ಶನ್ ಮತ್ತಿತರರು ಇದ್ದರು.
