ಮುಂದಿನ ವರ್ಷ 2 ಕೋಟಿ ಜನರಿಂದ ಯೋಗಾಭ್ಯಾಸಕ್ಕೆ ಸಂಕಲ್ಪ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮುಂದಿನ ವರ್ಷ 2 ಕೋಟಿ ಜನರಿಂದ ಯೋಗಾಭ್ಯಾಸಕ್ಕೆ ಸಂಕಲ್ಪ

  • ರಾಜ್ಯಾದ್ಯಂತ ಯೋಗ ವಿಸ್ತರಣೆಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿ ಸಲಹೆ
  • 500ಕ್ಕೂ ಹೆಚ್ಚು ಜನರಿಂದ ಯೋಗ ತಾಲೀಮು

ಮೈಸೂರು: ಮೈಸೂರಿನಲ್ಲೀಗ ಯೋಗ ಸುಪ್ರಸಿದ್ಧಿ ಆಗಿದೆ. ಇದನ್ನು ಎಲ್ಲ ಕಡೆಗೆ ವಿಸ್ತರಿಸುವ ನಿಟ್ಟಿನಲ್ಲಿ ಮುಂದಿನ ವರ್ಷ ರಾಜ್ಯಾದ್ಯಂತ 2 ಕೋಟಿ ಜನ ಯೋಗಾಭ್ಯಾಸ ಮಾಡುವಂತಾಗಬೇಕು ಎಂದು ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಮೈಸೂರು ಯೋಗ ಒಕ್ಕೂಟದ ವತಿಯಿಂದ
ನಗರದ ನಂಜನಗೂಡು- ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 3ನೇ ಸಂಕಲ್ಪ ದಿವಸದ ಯೋಗ ಪೂರ್ವಭ್ಯಾಸ ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ವಿಶ್ವ ಯೋಗ ದಿನವನ್ನು ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಬೇಕು. ಮುಂದಿನ ವರ್ಷ ರಾಜ್ಯದಲ್ಲಿ ಸುಮಾರು 2 ಕೋಟಿ ಜನ ಅವರು ಇರುವ ಕಡೆಗಳಲ್ಲೇ ಯೋಗ ಮಾಡುವಂತೆ ಆಗಬೇಕು ಎಂದು ಮಾರ್ಗದರ್ಶನ ಮಾಡಿದರು.
ಇಂದಿನ ದಿನಗಳಲ್ಲಿ ಯೋಗಾಭ್ಯಾಸದತ್ತ ಎಲ್ಲರೂ ಮುಖ ಮಾಡಿದ್ದಾರೆ. ಇದು ವ್ಯಕ್ತಿಯ ಶಾರೀರಿಕ ಅಂಗಸಾಧನೆಯಾದರೂ ಸಾರ್ವಜನಿಕವಾಗಿ ಇಡೀ ಸಮಾಜ ಪಾಲ್ಗೊಳ್ಳುವುದರಿಂದ ಎಲ್ಲರಲ್ಲೂ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಕೋವಿಡ್ ನಂತರದ ಕಾಲಮಾನದಲ್ಲಿ ಸಾಮಾಜಿಕವಾಗಿ ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಹೊಸ ಚಿಂತನೆಗಳಿಂದ ಸಮಾಜವನ್ನು ಸದೃಢಗೊಳಿಸಬೇಕಿದೆ ಎಂದರು.
ಎಲ್ಲ ಧರ್ಮಗಳಲ್ಲೂ ಒಳ್ಳೆಯ ಬೋಧನೆಗಳು ಇರುತ್ತವೆ. ಪ್ರಾರ್ಥನೆ ಹಾಗೂ ಧ್ಯಾನದ ಸಂಗಮವೇ ಯೋಗಾಭ್ಯಾಸವಾಗಿದೆ. ಮಾಧ್ಯಮಗಳಲ್ಲಿ ನಗರಗಳ ಯುವಜನತೆ ವ್ಯಸನಿಗಳಾದ ಸುದ್ದಿಗಳನ್ನು ಓದುವಾಗ ಬೇಸರವಾಗುತ್ತದೆ. ಎಲ್ಲ ದುಷ್ಟಗಳನ್ನು ದೂರವಾಗಿಸಿಕೊಳ್ಳಲು ವಯಸ್ಸಿನ ಇತಿಮಿತಿ ಇಲ್ಲದೆ ಸರ್ವ ಜನರ ಆರೋಗ್ಯ ಹಾಗೂ ದೈಹಿಕ ಚಲನಶೀಲತೆ ಹೆಚ್ಚಿಸುವ ಯೋಗವನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮೈಸೂರು ಎಂದರೆ ಯೋಗವೇ ಆಗಿದೆ. ಪ್ರಧಾನಿ ಮೋದಿ ಅವರು ಮೈಸೂರಿನಲ್ಲಿ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಂಡ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಪ್ರಾಮುಖ್ಯತೆ ದೊರಕಿದೆ. ಪ್ರತಿ ವರ್ಷ ಮೈಸೂರಿನ ಯೋಗ ಕಾರ್ಯಕ್ರಮವನ್ನು ಇತರೆ ರಾಜ್ಯಗಳು ಮಾದರಿಯನ್ನಾಗಿ ಅಳವಡಿಸಿಕೊಳ್ಳುತ್ತಿವೆ. ನಾನು ಪ್ರತಿದಿನವೂ ಯೋಗದ ಕೆಲವು ಆಸನಗಳನ್ನು ಅಭ್ಯಾಸಿಸುತ್ತಿದ್ದೇನೆ. ಇಂತಹ ಮೈಸೂರು ನಗರದ ಶಾಸಕನಾಗಿ ನಾನು ಇರುವುದು ನನ್ನ ಯೋಗಾಯೋಗ, ಅದೃಷ್ಟವೇ ಸರಿ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ ಮಾತನಾಡಿ, ರಾಜ್ಯದ ಆರೋಗ್ಯ, ಯೋಗ ಯೋಜನೆಯಲ್ಲಿ ಮೈಸೂರು ಜಿಲ್ಲೆ ಹಾಗೂ ನಂಜನಗೂಡು ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದರು.
ಮೈಸೂರು ಯೋಗ ಒಕ್ಕೂಟದ ಕಾರ್ಯದರ್ಶಿ ಹಾಗೂ ಜಿಎಸ್ಎಸ್ ಯೋಗ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಪ್ರತಿವರ್ಷ ಯೋಗ ದಿನವನ್ನು ವಿಶಿಷ್ಟವಾಗಿ ಮೈಸೂರಿನಲ್ಲಿ ಎಲ್ಲ ಯೋಗ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ಒಂದೆಡೆ ಲಕ್ಷಾಂತರ ಜನರು ಸೇರುವುದರ ಬದಲು ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು, ಸಂಘ- ಸಂಸ್ಥೆಗಳು, ದೇವಸ್ಥಾನಗಳು, ಸಾರ್ವಜನಿಕ ಮೈದಾನ, ಸರ್ಕಾರಿ ಕಚೇರಿಗಳು ಹಾಗೂ ಅಪಾರ್ಟ್ಮೆಂಟ್ ಗಳಲ್ಲಿ ಸಾಮೂಹಿಕವಾಗಿ ಯೋಗ ಆಚರಣೆ ಮಾಡಲಾಗುವುದು. ಎಲ್ಲೆಡೆ ನಡೆದ ಯೋಗಾಭ್ಯಾಸವನ್ನು ದಾಖಲೆಯನ್ನಾಗಿಸಿ ಪ್ರಧಾನಿ ಅವರಿಗೆ ಸಲ್ಲಿಸಲಾಗುವುದು ಎಂದರು.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತ ಅಂತಾರಾಷ್ಟ್ರೀಯ ಯೋಗ ಕೇಂದ್ರ ಮುಖ್ಯಸ್ಥ ರಾಮೇಶ್ವರ ರಾಜು, ಭಾರತ್ ಸ್ವಾಭಿಮಾನ ಟ್ರಸ್ಟ್ ನ ಮಧು, ಯೋಗ ಸ್ಪೋರ್ಟ್ಸ್ ಫೆಡರೇಷನ್ ನ ಗಣೇಶ್ ಕುಮಾರ್, ಮೈಸೂರು ಯೋಗ ಒಕ್ಕೂಟದ ದೇವರಾಜ್, ಶಿವಪ್ರಕಾಶ್, ಪಶುಪತಿ, ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ನಂಜುಂಡಸ್ವಾಮಿ, ಮೃತ್ಯುಂಜಯ, ಜಿಎಸ್ಎಸ್ ಯೋಗ ಸಂಸ್ಥೆಯ ಸರಳ ಹಾಗೂ ರೂಪಶ್ರೀ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಬಾಕ್ಸ್
500ಕ್ಕೂ ಹೆಚ್ಚು ಜನರಿಂದ ಯೋಗಾಭ್ಯಾಸ
ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸಂಕಲ್ಪ ದಿನದಲ್ಲಿ 500ಕ್ಕೂ ಹೆಚ್ಚು ಯೋಗಪಟುಗಳು ವಿಶ್ವ ಯೋಗ ದಿನದ ಶಿಷ್ಟಾಚಾರದನ್ವಯ ಯೋಗ ತಾಲೀಮು ನಡೆಸಿದರು.
ಯೋಗ ಪೂರ್ವಾಭ್ಯಾಸದಲ್ಲಿ ಯೋಗಪಟುಗಳು, ಸಾಧಕರು ಹಾಗೂ ಬೋಧಕರು ಭಾಗವಹಿಸಿದ್ದರು.
ಸುಮಾರು 45 ನಿಮಿಷಗಳ ಕಾಲ ಪ್ರಾರ್ಥನೆ, ಚಾಲನಾ ಕ್ರಿಯೆ, ತಾಡಾಸನ, ವೃಕ್ಷಾಸನ, ಪಾದ-ಹಸ್ತಾಸನ, ಅರ್ಧ ಚಕ್ರಾಂತಾಸನ ಮತ್ತು ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಕಾಸನ, ಉತ್ತಾನ ಮಂಡೂಕಾಸನ ಮತ್ತು ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ ಅಭ್ಯಾಸ ಮಾಡಲಾಯಿತು. ಕಪಾಲಭಾತಿ, ಪ್ರಾಣಾಯಾಮ, ನಾಡಿಶೋಧನೆ, ಧ್ಯಾನದೊಂದಿಗೆ ತಾಲೀಮು ಪೂರ್ಣಗೊಳಿಸಲಾಯಿತು.

Share This Article
Leave a Comment