ಪಬ್ಲಿಕ್ ಅಲರ್ಟ್ ನ್ಯೂಸ್:-ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಅರುಣ್ ಕುಮಾರ್
ಮೈಸೂರು, ಜೂನ್ 17(ಕರ್ನಾಟಕ ವಾರ್ತೆ )
ಸರ್ಕಾರ ಬಡವರು, ಹಿಂದುಳಿದ ವರ್ಗದವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್ ಅರುಣ್ ಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಎಂಬುದು ಸಮಿತಿಯ ಉದ್ದೇಶ ಎಂದರು.
ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಹಾಜರಾಗಬೇಕು, ಹಾಜರಾಗದಿದ್ದಲ್ಲಿ ವರದಿಯನ್ನು ಜಿಲ್ಲಾ ಮಟ್ಟದ ಸಮಿತಿಗೆ ವರದಿ ನೀಡಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಪ್ರೊ ಶಿವಕುಮಾರ್ ಅವರು ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯಲ್ಲಿ ಮೃತ ಫಲಾನುಭವಿ, ಐ.ಟಿ, ಜಿ.ಎಸ್.ಟಿ ಪಾವತಿ ಮಾಡುತ್ತಿರುವ ಫಲಾನುಭವಿಗಳು ಅನರ್ಹರರಾಗಿದ್ದು, ಅವರಿಗೆ ಪಾವತಿಸಲಾಗುತ್ತಿರುವ ಗೃಹಲಕ್ಷಿ ಹಣ ನಿಲುಗಡೆಯಾಗಬೇಕು, ಅನರ್ಹರಾಗಿ ಹಣ ಪಡೆದಿದ್ದಲ್ಲಿ ಅವರಿಂದ ವಸೂಲಿ ಮಾಡಬೇಕು. ಅನರ್ಹ ಗೃಹ ಲಕ್ಷಿ ಯೋಜನೆಯ ಫಲಾನುಭವಿಗಳ ನಿಖರ ಮಾಹಿತಿಯನ್ನು ಸಭೆಗೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಹುಣಸೂರು ಬಸವಣ್ಣ ಅವರು ಮಾತನಾಡಿ ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆ ತಲುಪಿಸಲು ತೊಂದರೆಯಿದ್ದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹಾರಕ್ಕೆ ಕ್ರಮವಹಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಸದಸ್ಯ ಸಾ.ಮಾ.ಯೋಗೇಶ್ ಅವರು ಮಾತನಾಡಿ ಹೊರರಾಜ್ಯದ ಮಹಿಳೆಯರು ಗೃಹಲಕ್ಷಿಯ ಫಲಾನುಭವಿಗಳಾಗಿರಬಹುದು. ಅವರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗಳೊಂದಿಗೆ ಚುರುಕಾಗಿ ಕೆಲಸ ನಿರ್ವಹಿಸಿ ಶೀಘ್ರವಾಗಿ ವರದಿ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 13677 ಗೃಹಲಕ್ಷ್ಮಿ ಫಲಾನುಭವಿಗಳು ಮರಣ ಹೊಂದಿರುತ್ತಾರೆ. ಮನೆ- ಮನೆಗೆ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆಯರು ಪರಿಶೀಲಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವರದಿ ನೀಡುತ್ತಿದ್ದಾರೆ. ಪರಿಶೀಲನೆ ಕೆಲಸವನ್ನು ಬೇಗನೇ ಪೂರ್ಣಗೊಳಿಸಲಾಗುವುದು. ಬಯೋಮೆಟ್ರಿಕ್ ಹಾಗೂ ಹೊಸ ಅರ್ಜಿ ಸಲ್ಲಿಕೆ ಕುರಿತಂತೆ ಸರ್ಕಾರದಿಂದ ಮಾರ್ಗಸೂಚಿ ಬಂದಿರುವುದಿಲ್ಲ, ಬಂದ ಕೂಡಲೇ ಅನುಷ್ಠಾನ ಗೊಳಿಸಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆಯಡಿ 2026-27ನೇ ಸಾಲಿನಲ್ಲಿ ಬಿಡುಗಡೆಯಾದ ಮೊದಲನೇ ಕಂತಿನಲ್ಲಿ 671674 ಫಲಾನುಭವಿಗಳಿಗೆ ಅನುದಾನ ರೂ.13433.48 ಲಕ್ಷಗಳು ಬಿಡುಗಡೆಯಾಗಿದ್ದು ಫಲಾನುಭವಿಗಳಿಗೆ ಪಾವತಿಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಚಂದ್ರಶೇಖರ್, ಅಬ್ದುಲ್ ಖಾದರ್, ಚಲುವರಾಜು, ಮಹದೇವ್, ಗುರುಸ್ವಾಮಿ, ಉದಯಶಂಕರ್, ಚಲುವರಾಜು, ನಿತಿನ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
