ಪಬ್ಲಿಕ್ ಅಲರ್ಟ್ ನ್ಯೂಸ್:-ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ: ಲಕ್ಷ್ಮಿಕಾಂತ ರೆಡ್ಡಿ ಜಿ
ಮೈಸೂರು, ಜೂನ್ 20(ಕರ್ನಾಟಕ ವಾರ್ತೆ):-
ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ-2026 ರಲ್ಲಿ ಕಂಬಳ ಕಾರ್ಯಕ್ರಮವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂಬಳ ಆಯೋಜನೆಯ ಬಗ್ಗೆ ಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು ಸರಿಯಾದ ಸ್ಥಳ ದೊರಕದ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ ಎಂದರು.
ಈ ಬಾರಿ 3 ತಿಂಗಳ ಮೊದಲೇ ಕಂಬಳ ಆಯೋಜಿಸಲು ಮೈಸೂರು ನಗರದ ವಿಜಯನಗರ ಮೊದಲನೇ ಹಂತ, ವಿಜಯನಗರ ನಾಲ್ಕನೇ ಹಂತ ಹಾಗೂ ಸಾತಗಳ್ಳಿ ರಿಂಗ್ ರೋಡ್ ರಸ್ತೆಯಲ್ಲಿ ಮೂರು ಸ್ಥಳ ಗುರುತಿಸಲಾಗಿದ್ದು, ಒಂದು ಸ್ಥಳವನ್ನು ಆಯ್ಕೆ ಮಾಡುವುದು ಎಂದರು.
ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಬೇಕಿದ್ದು, ಸ್ಥಳ ಆಯ್ಕೆ ಮಾಡುವಾಗ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಿರುವ ಸ್ಥಳವನ್ನು ನೋಡಿ ಆಯ್ಕೆ ಮಾಡಿ ಎಂದರು.
ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುವ ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ನ ಜನರಲ್ ಸೆಕ್ರೆಟರಿ ವಿಜಯ್ ಕುಮಾರ್ , ಬೆಂಗಳೂರು ಕಂಬಳ ವರ್ಕಿಂಗ್ ಪ್ರೆಸಿಡೆಂಟ್ ಮುರುಳಿಧರ್ ರೈ ಹಾಗೂ ಜಯಸೂರ್ಯ ರೈ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
