ಪಬ್ಲಿಕ್ ಅಲರ್ಟ್ ನ್ಯೂಸ್:-ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್ ನಲ್ಲಿ ಜಿಲ್ಲೆಯಲ್ಲಿ 100% ಸಾಧನೆ – ಡಾ. ಪಿ ಸಿ ಕುಮಾರ್ ಸ್ವಾಮಿ
ಮೈಸೂರು ಜೂನ್ 20 (ಕರ್ನಾಟಕ ವಾರ್ತೆ) ಮೈಸೂರು ಜಿಲ್ಲೆಯಲ್ಲಿ ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್ ನಲ್ಲಿ ಜಿಲ್ಲೆಯಲ್ಲಿ ಶೇಕಡಾ 100 ರಷ್ಟು ಪ್ರಗತಿ ಆಗಿದ್ದು ಇದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕುಮಾರ್ ಸ್ವಾಮಿ ಪಿ ಸಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಕಲ್ ಸೆಲ್ ಅನಿಮಿಯಾ ದಿನ ಹಾಗೂ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೂರು ವರ್ಷದಿಂದ ಸಿಕಲ್ ಸೆಲ್ ಅನಿಮಿಯಾ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಸಿಕಲ್ ಸೆಲ್ ಅನಿಮಿಯಾ ಚಟುವಟಿಕೆಯ ಯಶಸ್ವಿಗೆ ಗ್ರೌಂಡ್ ಲೆವೆಲ್ ನಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆ ಪ್ರಮುಖ ಕಾರಣ. ಮೈಸೂರು ಜಿಲ್ಲೆಯಲ್ಲಿ 40 ಲಕ್ಷ ಜನಸಂಖ್ಯೆ ಇದೆ. ಹೆಚ್ಚಿನ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ಹಾಗೂ ಕಾರ್ಯಾಗಾರಗಳನ್ನು ನಡೆಸಿ ಮುಂದೆಯೂ ಇದೆ ರೀತಿಯ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಸಿಕಲ್ ಸೆಲ್ ಅನಿಮಿಯಾ ಎಂಬುದು ವಂಶಾವಳಿ ಕಾಯಿಲೆಯಾಗಿದೆ. ಇದು ಅವರ ಪೂರ್ವಜರಿಂದ ಮುಂದಿನ ಪೀಳಿಗೆಗೆ ಹರಡುತ್ತದೆ. ಜಿಲ್ಲೆಯಲ್ಲಿ 1,59,162 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 1353 ಸಿಕಲ್ ಸೆಲ್ ವಾಹಕರು ಮತ್ತು 178 ಸಿಕಲ್ ಸೆಲ್ ರೋಗಿಗಳು ಕಂಡುಬಂದಿದ್ದಾರೆ. ಕೆ ಆರ್ ಆಸ್ಪತ್ರೆಯನ್ನು ಕರ್ನಾಟಕ ರಾಜ್ಯದ ಸಿಕಲ್ ಸೆಲ್ ರೋಗದ ಶ್ರೇಷ್ಠತಾ ಕೇಂದ್ರ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಜೆ ಎಸ್ ಎಸ್ ವೈದ್ಯಕೀಯ ಸಂಸ್ಥೆಯ ವೈಸ್ ಚಾನ್ಸಲರ್ ಬಸವನಗೌಡಪ್ಪ ಅವರು ಮಾತನಾಡಿ ಸಿಕಲ್ ಸೆಲ್ ಅನಿಮಿಯಾ ಗುಡ್ಡಗಾಡು ಪ್ರದೇಶ ಹಾಗೂ ಕಾಡಂಚಿನ ಪ್ರದೇಶದ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೈಸೂರು ಜಿಲ್ಲೆಯಲ್ಲಿ ಹೆಚ್ ಡಿ kotez ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಶೇಕಡಾ 100%, ಸ್ಕ್ರೀನಿಂಗ್ ಆಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಗೋಪಿನಾಥ್ ಅವರು ಮಾತನಾಡಿ ಕಾಯಕಲ್ಪ ಯೋಜನೆಯಡಿ ಪಿಹೆಚ್ ಸಿ ಗಳು ಹಾಗೂ ಸಿ ಹೆಚ್ ಸಿ ಗಳು ಪ್ರಗತಿಯನ್ನು ಸಾಧಿಸಬೇಕು. ಜಿಲ್ಲೆಯ ಹಲವು ಆಸ್ಪತ್ರೆಗಳು ಕಡಿಮೆ ಪ್ರಗತಿಯನ್ನು ಸಾಧಿಸಿರುವ ಕಾರಣ ಕಡಿಮೆ ಅಂಕಗಳು ಬಂದಿವೆ. ಇದರಿಂದ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಕಡಿಮೆ ಅಂಕಗಳು ಬಂದು ಸಾಧನೆ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ ನಾಗರಾಜ್ ಅವರು ಮಾತನಾಡಿ ಗೃಹ ಆರೋಗ್ಯ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗೃಹ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ಗಮನ ಹರಿಸಬೇಕು. ಗೃಹ ಆರೋಗ್ಯ ಪ್ರಾರಂಭವಾಗಿ 7 ತಿಂಗಳು ಆಗಿದೆ. ಪಿ ಹೆಚ್ ಸಿ ಹಾಗೂ ಸಿ ಹೆಚ್ ಸಿ ಗಳ ಪ್ರಗತಿ ಸಮಾಧಾನಕರವಾಗಿಲ್ಲ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬೇಟಿ ನೀಡಿ 30 ವರ್ಷ ದಾಟಿದ ವ್ಯಕ್ತಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಅವರ ಆರೋಗ್ಯದ ಸ್ಥಿತಿಗತಿಗಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಮಾನದಂಡಗಳಲ್ಲಿ ಗುರುತಿಸಿರುವ 09 ವಿಧದ ಕಾಯಿಲೆಗಳಲ್ಲಿ ಯಾವುದಾದರೂ ಕಾಯಿಲೆಗೆ ತುತ್ತಾಗಿದ್ದಾರೆ ರಿಪೋರ್ಟ್ ಮಾಡಬೇಕು ಎಂದು ಸೂಚನೆ ನೀಡಿದರು.
ಡಾ. ಪುನೀತ್ ರಾಜ್ ಕುಮಾರ್ ಹೃದಯ ಸಂಜೀವಿನಿ ಯೋಜನೆಯಡಿ ಹೃದಯ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೃದಯ ಆರೋಗ್ಯದ ಸಮಸ್ಯೆ ಕುರಿತ ಲಕ್ಷಣಗಳು ಕಂಡುಬಂದರೆ ಇಸಿಜಿ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಉಪ ನಿರ್ದೇಶಕರಾದ ಡಾ ಪ್ರಕಾಶ್, ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿಗಳಾದ ಡಾ ಬೃಂದಾ, ಸಿಕಲ್ ಸೆಲ್ ಅನಿಮಿಯಾ ನೋಡಲ್ ಅಧಿಕಾರಿ ಡಾ. ಸಿರಾಜ್ ಅಹಮ್ಮದ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸುವರ್ಣ, ಜೆಎಸ್ಎಸ್ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲರಾದ ಡಾ ಎಂ ನಾರಾಯಣಪ್ಪ, ಡಾ ಗೋಪಿನಾಥ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
