ಮೈಸೂರಲ್ಲಿ ಹೆಚ್ಚುತ್ತಿರುವ ಅಪರಾಧ ಸಿಎಂ ರಿಂದ ತಡೆಯಲಾಗುತ್ತಿಲ್ಲ: ಸಂಸದ ಕಿಡಿ

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ತವರು ಜಿಲ್ಲೆ ಅನ್ನುತ್ತಾರೆ ಅಷ್ಟೆ  ಮೈಸೂರು ನಗರದಲ್ಲಿ ಮೇಲಿಂದ ಮೇಲೆ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಇದನ್ನು ತಡೆಯುವ ಕೆಲಸ ಆಗುತ್ತಿಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಮೈಸೂರು ನನ್ನ ತವರು ಜಿಲ್ಲೆ, ಪ್ರತಿಷ್ಠೆ ಅಂತೆಲ್ಲ ಮಾತನಾಡುವ ಸಿದ್ದರಾಮಯ್ಯ ಅವರು ಈಗಲೂ ಅದೇ ರೀತಿ ಕಾಳಜಿ ತೋರಲಿ. ದಸರಾ ಸಂದರ್ಭದಲ್ಲಿ ವ್ಯಾಪಾರ ಮಾಡಲು ಸಾವಿರಾರು ಜನರು ಕುಟುಂಬ ಸಮೇತರಾಗಿ ಮೈಸೂರಿಗೆ ಬರುತ್ತಾರೆ. ಪ್ರತಿ ವರ್ಷವೂ ಬರುವುದು ಗೊತ್ತಿದ್ದ ಮೇಲೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಯಾರು ಬರುತ್ತಿದ್ದಾರೆ, ಅವರೆಲ್ಲ ಎಲ್ಲಿ ಕುಳಿದುಕೊಳ್ಳುತ್ತಾರೆ ಅನ್ನುವ ಕನಿಷ್ಠ ಮಾಹಿತಿಯಾದರೂ ಪೊಲೀಸ್ ಇಲಾಖೆಗೆ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.
ಇತಿಹಾಸದಲ್ಲಿ ಮೈಸೂರು ಸ್ವಚ್ಛತೆ, ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ಕಾನೂನು ಆಡಳಿತ ಕುಸಿಯುತ್ತಿದೆ. ಈ ಹಿಂದೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಆಯ್ತು. 340 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಯಿತು. ಮಹಾರಾಷ್ಟ್ರ ಪೊಲೀಸರು ಇದನ್ನು ಕಂಡು ಹಿಡಿದರು. ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಯ್ತು. ನಿನ್ನೆ ಚಿಕ್ಕ ಮಗು ಮೇಲೆ ರೇಪ್ ಅಂಡ್ ಮರ್ಡರ್ ಆಯ್ತು. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ?. ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಅಂತಾರೆ. ಈಗ ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ. ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣ ಅತ್ಯಂತ ಹೇಯವಾದದ್ದು. ಅದನ್ನು ಖಂಡಿಸಲು ಪದಗಳೇ ಇಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಪೊಲೀಸ್ ವ್ಯವಸ್ಥೆಯೂ ಹಾಳಾಗಿದೆ. ಹೀಗಾಗಿಯೇ ಮೇಲಿಂದ ಮೇಲೆ ಅಪರಾಧ ಕೃತ್ಯಗಳು ನಡೆಯುತ್ತಿವೆ  ಎಂದು ಕಿಡಿಕಾರಿದರು.
70 ಕೋಟಿ ರೂ. ವಾಪಸ್: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬೇಕಂತಲೇ ಮುಂದೂಡುತ್ತ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳು ಇಲ್ಲದ ಕಾರಣ 15ನೇ ಹಣಕಾಸು ಯೋಜನೆಯಡಿ ಬಂದಿದ್ದ 60-70 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಿದೆ. ಆದ್ದರಿಂದ ಶೀರ್ಘದಲ್ಲೇ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕೆಂದು ಸಂಸದರು ಆಗ್ರಹಿಸಿದರು.
ಮಳೆಯಿಂದಾಗಿ ಕ್ಯಾತಮಾರನಹಳ್ಳಿ ಭಾಗದಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಅಧಿಕಾರಿಗಳು ಇರಬಹುದು, ಅವರು ಜನಪ್ರತಿನಿಧಿಗಳಲ್ಲ. ಸ್ಥಳೀಯವಾಗಿ ಜನಪ್ರತಿನಿಧಿ ಹೇಳಬೇಕು, ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕಾಂಗ್ರೆಸ್ ಮಾತು ಮಾತಿಗೂ ನಮ್ಮದು ಸಂವಿಧಾನದ ಪರವಾದ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಶಾಸಕ ಟಿ.ಎಸ್.ಶ್ರೀವತ್ಸ, ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಮಾಜಿ ಮೇಯರ್ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ರಘು, ಮಹೇಶ್ ಕೇಬಲ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಸಂತೋಷ್ ಕುಮಾರ್ ಇದ್ದರು.


ಬಾಕ್ಸ್‌
ಕಾಂಗ್ರೆಸ್ ಕುಟುಂಬಸ್ಥರ ದಸರಾ
ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಕಾಂಗ್ರೆಸ್ಸಿನ ಕೆಲ ರಾಜಕಾರಣಿಗಳು ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿತ್ತು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು.
ದಸರಾ ಆರಂಭಕ್ಕೂ ಮುನ್ನವೂ ಅನೇಕ ಗೊಂದಲಗಳು ನಡೆದಿದ್ದವು. ಜಂಬೂ ಸವಾರಿಯ ದಿನ ಸಾವಿರಾರು ಜನ ಪಾಸ್ ಇದ್ದರೂ ಅರಮನೆಯೊಳಗೆ ಬರಲು ಸಾಧ್ಯವಾಗಲಿಲ್ಲ. ಪಾಸ್ ವ್ಯವಸ್ಥೆಗೆ ಪಾರದರ್ಶಕತೆ ತನ್ನಿ ಎಂದು ನಾವು ಅನೇಕ ಬಾರಿ ಹೇಳಿದ್ದೇವೆ. ನಮಗ್ಯಾರಿಗೂ ಪಾಸ್ ಬೇಡ. ಸರ್ಕಾರಿ ಶಿಷ್ಟಾಚಾರದಂತೆ ಕಾರ್ಯಕ್ರಮಗಳಿಗೆ ಬಂದು ಹೋಗುತ್ತೇವೆ. ಆದರೆ ಜಂಬೂ ಸವಾರಿಗೆ ಟಿಕೆಟ್ ವ್ಯವಸ್ಥೆ ಮಾಡಿ. ಎಷ್ಟು ಟಿಕೆಟ್ ಮುದ್ರಿಸಿದ್ದೇವೆ, ಯಾರಿಗೆ ಎಷ್ಟು ಕೊಟ್ಟಿದ್ದೇವೆ ಎಂಬುದನ್ನು ಪಾರದರ್ಶಕವಾಗಿ ಹೇಳಿ. ಆಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಒತ್ತಾಯಿಸಿದರು.

ಬಾಕ್ಸ್‌
ನಟೇಶ್‌ ಅವರನ್ನು ಬಂಧಿಸಲಿ: ಶ್ರೀವತ್ಸ
ಮೈಸೂರು: ಮುಡಾ 50:50 ಹಗರಣದಲ್ಲಿ ಭಾಗಿಯಾಗಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆಯುಕ್ತ ನಟೇಶ್ ಅವರನ್ನೂ ಬಂಧಿಸಬೇಕೆಂದು ಶಾಸಕ ಟಿ.ಎಸ್.ಶ್ರೀವತ್ಸ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ದಿನೇಶ್ ಅವರಿಂದ 40ಕ್ಕೂ ಹೆಚ್ಚು ನಿವೇಶನಗಳನ್ನು ಜಪ್ತಿ ಮಾಡಿದೆ. ಅದೇ ರೀತಿ ಇನ್ನಷ್ಟು ಅಧಿಕಾರಿಗಳ ಮೇಲೆ ಕ್ರಮ ಆಗಬೇಕಿದೆ. ಚಾಮುಂಡೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಲಾಗಿದ್ದ 44 ನಿವೇಶನಗಳನ್ನು ಮುಡಾ ವಾಪಸ್ ಪಡೆದುಕೊಂಡಿದೆ. ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಸದರಿ ಜಾಗಕ್ಕೆ ಕೂಡಲೇ ಫಲಕ ಹಾಕಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಎಂಡಿಎ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Share This Article
Leave a Comment