ಪಬ್ಲಿಕ್ ಅಲರ್ಟ್
ಮೈಸೂರು: ಈ ಬಾರಿಯ ರಾಜ್ಯ ಸರ್ಕಾರದ ಜಾತಿ ಗಣತಿ ವೇಳೆ ಪರಿಶಿಷ್ಟ ಜಾತಿ, ಪಂಗಡದವರು ಧರ್ಮ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸುವುದು ಸೂಕ್ತ ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಶೂದ್ರ, ಅತಿ ಶೂದ್ರರು ಈ ದೇಶದ ಆದಿ ಜನರು ಮತ್ತು ಬೌದ್ಧರು ಪ್ರತಿ ಕ್ರಾಂತಿಯ ಸಂದರ್ಭದಲ್ಲಿ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಾಹ್ಮಣರ ತಂತ್ರಗಾರಿಕೆಯಿಂದ ಹಿಂದೂಗಳೆನಿಸಿದ್ದಾರೆಂದರು. ಜಾತಿ ವ್ಯವಸ್ಥೆಯ ಶ್ರೇಣಿಯಲ್ಲಿ ಕೆಳಗಡೆ ನೂಕಲ್ಪಟ್ಟ ಅಸ್ಪೃಶ್ಯರ ಜಾತಿ ವ್ಯವಸ್ಥೆಯ ಹೊರಗಿದ್ದಾರೆ. ಆದ್ದರಿಂದಲೇ ಅವರನ್ನು ಅವರ್ಣೀಯರ ಎಂದು ಸಹಾ ಕರೆಯುತ್ತಾರೆ. ಈ ಸತ್ಯವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರೂ ಅರಗಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ. ಹೀಗಾಗಿ ಜಾತಿಗಣತಿಯಲ್ಲಿ ಎಲ್ಲ ಅಸ್ಪೃಶ್ಯ ಸಮುದಾಯ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸಿಕೊಳ್ಳಬೇಕು. ಬೇಕಿದ್ದರೆ ಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿಯ ಹೆಸರನ್ನು ಬರೆಯಿಸಬಹುದಾಗಿದೆ. ಇದರಿಂದ ಮೀಸಲಾತಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ, ಶಿವರಾಜು, ಪ್ರೊ.ಟಿ. ನಂಜುಂಡಯ್ಯ ಮೊದಲಾದವರು ಇದ್ದರು.
