ಪಬ್ಲಿಕ್ ಅಲರ್ಟ್ ನ್ಯೂಸ್:-ಇಂದು, ನಾಳೆ ಎಸ್ಐಆರ್ ವಿಶೇಷ ಅಭಿಯಾನ
- ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಬೈಕ್ ಜಾಥಾ ಮೂಲಕ ಸಾರ್ವಜನಿಕರಿಗೆ ಜಾಗೃತಿ
- ಮತದಾರರು ಎಸ್ಐಆರ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಒ ರವಿಚಂದ್ರ ಮನವಿ
ಹೆಚ್.ಡಿ.ಕೋಟೆ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಅಂಗವಾಗಿ ಸೆಪ್ಟೆಂಬರ್ 19(ಶನಿವಾರ) ಮತ್ತು 20 (ಭಾನುವಾರ) ರಂದು ನಡೆಯುವ ವಿಶೇಷ ಅಭಿಯಾನ ಅಂಗವಾಗಿ ಬೈಕ್ ಜಾಥಾ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಸ್ವೀಪ್ ಸಮಿತಿವತಿಯಿಂದ ವಿಶೇಷ ಅಭಿಯಾನದ ಪ್ರಚಾರ ಕುರಿತ ಸ್ವೀಪ್ ಚಟುವಟಿಕೆಯಡಿ ಆಯೋಜಿಸಿದ್ದ, ಬೈಕ್ ಜಾಥಾಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳೂ ಆದ ರವಿಚಂದ್ರ ಎಸ್ ಅವರು ಹಸಿರು ನಿಶಾನೆ ತೋರಿ ಮಾತನಾಡಿದರು.
ವಿಶೇಷ ಸಮಗ್ರ ಪರಿಷ್ಕರಣೆಯು “ಯಾವುದೇ ಅರ್ಹ ಮತದಾರ ಮತದಾನದಿಂದ ಹೊರಗುಳಿಯಬಾರದು” ಎಂಬ ದ್ಯೆಯದೊಂದಿಗೆ ನಡೆಯುತ್ತಿದ್ದು, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತೀಯ ಮತದಾರರು ಸೆ.19ಮತ್ತು 20 ರಂದು ನಡೆಯುವ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮತದಾನ ಕೇಂದ್ರದಲ್ಲಿ ವಿಶೇಷ ಅಭಿಯಾನದ ದಿನಗಳಂದು ಹಾಜರಿರುತ್ತಾರೆ. ಅವರು ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಹಾಗೂ ಅರ್ಹ ಮತದಾರರು ಹಕ್ಕು, ಆಕ್ಷೇಪಣೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ಹುಡುಕಲು, ಹೊಸ ಮತದಾರರ ಸೇರ್ಪಡೆ, ಪಟ್ಟಿಯಿಂದ ಹೆಸರು ತೆಗೆದು ಹಾಕಲು, ವಿಳಾಸ ಬದಲಾವಣೆ, ಹೆಸರು ಅಥವಾ ವಿವರಗಳ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಬೈಕ್ ಜಾಥಾ ಮೂಲಕ ಜಾಗೃತಿ: ಬೈಕ್ ಜಾಥಾವು ತಾಲ್ಲೂಕು ಪಂಚಾಯಿತಿ ಆವರಣದಿಂದ ಹೋರಟು ಹೆಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ ಮೂಲಕ ಪ್ಲೆಕಾರ್ಡ್ ಪ್ರದರ್ಶಿ ಎಸ್ಐಆರ್ ಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತಾ ಹಾಗೂ ಹಾಡುಗಳನ್ನು ಬಿತ್ತರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಾ ಬಸ್ ನಿಲ್ದಾಣವರೆಗೆ ಸಾಗಿ, ಅದೇ ಮಾರ್ಗದಲ್ಲಿ ವಾಪಸ್ಸಾಗಿ ತಾಲ್ಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಬೈಕ್ ಜಾಥಾ ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣ ಹಾಗೂ ಅಂಗಡಿ ಮುಗ್ಗಟಗಳ ಮುಂದೆ ನೆರೆದಿದ್ದ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿಗಳಾದ ಮುತ್ತುರಾಜು ಎಸ್, ಸಹಾಯಕ ಯೋಜನಾಧಿಕಾರಿಗಳಾದ ಜಯಂತಿ, ವ್ಯಸ್ಥಾಪಕರಾದ ಹನುಮಂತರಾಜು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
