ಪಬ್ಲಿಕ್ ಅಲರ್ಟ್
ಮೈಸೂರು: ರಾಜಶೇಖರ ಕದಂಬ ಅವರು ಸಂಗ್ರಹಿಸಿರುವ ಮೈಸೂರು ರಂಗತಂಡಗಳ ಭಿತ್ತಿಚಿತ್ರಗಳಲ್ಲಿ ಆರು ದಶಕಗಳ ರಂಗಚರಿತ್ರೆಯ ಮಾಹಿತಿಯನ್ನು ಅನಾವರಣ ಮಾಡಿದ್ದಾರೆ ಎಂದು ರಂಗಾಯಣ ಮಾಜಿ ನಿರ್ದೇಶಕ ಸಿ.ಬಸಲಿಂಗಯ್ಯ ಶ್ಲಾಘಿಸಿದರು.
ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಅವರು ಸಂಗ್ರಹಿಸಿರುವ ಮೈಸೂರು ರಂಗತಂಡಗಳ ಭಿತ್ತಿಚಿತ್ರಗಳ ಪ್ರದರ್ಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, 1965ರ ರಣಧೀರ ಕಂಠೀರವದಿಂದ ಹಿಡಿದು ಸುಮಾರು 400 ಭಿತ್ತಿಪತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ ಎಂದರು.
ಕೆಲವರಿಗೆ ನಾಣ್ಯ, ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸ ಇರುತ್ತದೆ. ಆದರೆ ಕದಂಬರದು ರಂಗತಂಡಗಳ ಭಿತ್ತಿಪತ್ರಗಳನ್ನು ಸಂಗ್ರಹಿಸುವ ಹುಚ್ಚು ಹವ್ಯಾಸ,. ತಮ್ಮ ತಂಡ ಪ್ರದರ್ಶಿಸಿದ ನಾಟಕಗಳು ಮಾತ್ರವಲ್ಲದೇ ಬೇರೆ ತಂಡಗಳ ಭಿತ್ತಿಪತ್ರಗಳನ್ನು ಸಂಗ್ರಹಿಸಲು ಆಸಕ್ತಿ ತೋರಿಸಿದ್ದಾರೆ ಎಂದರು.
ರಂಗಭೂಮಿ ಹಾಗೂ ಕಲಾವಿದರನ್ನು ಕುರಿತು ತುಲನಾತ್ಮಕವಾಗಿ ಉಪನ್ಯಾಸ ನೀಡಿದ ಅವರು, ಕಲಾವಿದರ ಒಂದು ರೇಖೆ ಬೆಂಕಿಯನ್ನು ಹಚ್ಚಬಲ್ಲದು, ಶಾಂತಿಯನ್ನು ಮೂಡಿಸಬಲ್ಲದು, ಕಲಾವಿದನಿಗೆ ಬಣ್ಣ ಬೇಕೆಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು.ವಿದ್ಯಾಲಯದ ಕಾರ್ಯದರ್ಶಿ ಬಾಬುರಾವ್ ಅತಿಥಿಯಾಗಿದ್ದರು. ಪ್ರಾಂಶುಪಾಲ ಕೆ.ಸಿ. ಮಹದೇವಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಸಿ. ಚಿಕ್ಕಣ್ಣ ಕಾರ್ಯಕ್ರಮ ನಿರೂಪಿಸಿದರು. ಡಾ.ವಿಠಲರೆಡ್ಡಿ ಚುಳಕಿ ವಂದಿಸಿದರು. ಅಧ್ಯಾಪಕರಾದ ಪರಮೇಶ್ವರ, ಅಶೋಕ್ ಇದ್ದರು. ನಾಗೇಂದ್ರಕುಮಾರ್ ಪ್ರಾರ್ಥಿಸಿದರು. ನ.9 ರವರೆಗೆ ಈ ಪ್ರದರ್ಶನವನ್ನು ವೀಕ್ಷಿಸಬಹುದು.
